ಶಾಪ (ಭಾಗ-೧):ಪಾರ್ಥಸಾರಥಿ ಎನ್


ನನಗೆ ಆ ಮನೆಗೆ ಬರುವ ಅಗತ್ಯವೇನಿರಲಿಲ್ಲ. ಊರಹೊರಗಿನ ದುರ್ಗಾ ದೇವಾಲಯದಲ್ಲಿ ಕುಳಿತಿದ್ದ ನನ್ನನ್ನು ಅವನಾಗಿಯೇ ಮಾತನಾಡಿಸಿದ. ಅವನ ಹೆಸರು ಶ್ರೀನಿವಾಸ. "ಎಲ್ಲಿಂದ ಬರುತ್ತಿದ್ದೀರಿ?" ಅವನು ನನ್ನನ್ನು ಕುತೂಹಲದಿಂದ ಪ್ರಶ್ನಿಸಿದ. ಪ್ರಶ್ನೆ ಸರಿಯಾಗಿಯೆ ಇತ್ತು, ಹಾಗಾಗಿ ಉತ್ತರಿಸಿದೆ "ಉತ್ತರದ ಹರಿದ್ವಾರದಿಂದ ಹೊರಟವನು ಹಾಗೆಯೆ ಸುತ್ತುತ್ತ ಬಂದೆ, ಈಗ ನಿಮ್ಮ ಊರಿಗೆ ಬಂದಿರುವೆ". ಮತ್ತೆ ಕುತೂಹಲದಿಂದ ಪ್ರಶ್ನಿಸಿದ, "ರಾತ್ರಿ ಉಳಿಯುವ ಏರ್ಪಾಡು ಹೇಗೆ, ಎಲ್ಲಿ ಇಳಿದುಕೊಳ್ಳುವಿರಿ?"

ನನಗೆ ಆ ರೀತಿಯ ಪ್ರಶ್ನೆಗಳು ಕಾಡುತ್ತಲೆ ಇರಲಿಲ್ಲ. ಇರುವೆನು ಎನ್ನುವಾಗ ರಾತ್ರಿಯೇನು, ಹಗಲೇನು, ಮುಂದಿನ ಊರಿಗೆ ಹೊರಡುವವರೆಗು ಅಲ್ಲಿ ಇರುವುದು, ಎಲ್ಲಿ ಅಂತೇನು ಇಲ್ಲ, ಹಾಗಾಗಿ ಉತ್ತರಿಸಿದೆ. "ಏರ್ಪಾಡು ಅಂತೇನು ಇಲ್ಲ, ಇಲ್ಲಿಯೆ ದುರ್ಗಾದೇವಿಯ ಎದುರಿಗೆ ಮಲಗಿಬಿಡುವುದು, ಎಚ್ಚರವಾದಾಗ ಇಲ್ಲಿಂದ ಹೊರಡುವುದು" ಎಂದೆ ನಗುತ್ತ. ಅದಕ್ಕವನು ಅನುಮಾನದಿಂದ ಪ್ರಶ್ನಿಸಿದ, "ನಿಮ್ಮ ಅಭ್ಯಂತರವಿಲ್ಲದಿದ್ದರೆ, ನಮ್ಮ ಮನೆಯಲ್ಲಿ ಇಂದು ರಾತ್ರಿ ಬಂದು ಇರಬಹುದಲ್ಲ? ಹಾಗೆ ಇಂದಿನ ರಾತ್ರಿಯ ತಮ್ಮ ಭೋಜನವು ನಮ್ಮ ಮನೆಯಲ್ಲಿ ನಡೆದರೆ ಸಂತೋಷ". ನನ್ನ ಉತ್ತರ, "ನನಗೆ ಯಾವ ಅಭ್ಯಂತರ, ನನಗೆ ಎಲ್ಲಿದ್ದರು ನಡೆಯುತ್ತದೆ, ಎಲ್ಲವು ದುರ್ಗಿಯ ಅವಾಸಸ್ಥಾನವೆ ನನಗೆ, ಗುಡಿಯಾದರು ಒಂದೇ, ನಿಮ್ಮ ಮನೆಯಾದರು ಒಂದೇ"."ಹಾಗಿದ್ದರೆ ನನ್ನ ಜೊತೆ ಬನ್ನಿ" ಎನ್ನುತ್ತ ಅವನು ಹೊರಟ. 

ದುರ್ಗಿಯ ಕಡೆಗೊಮ್ಮೆ ಕೈಮುಗಿದು ಅವನ ಜೊತೆ ಹೊರಟೆ. ದೇವಾಲಯದ ಹೊರಗೆ ಬಂದರೆ ಅವನು ಕಾರಿನತ್ತ ನಡೆದ, ನನಗೆ ಆಶ್ಚರ್ಯವೆನಿಸಿತು, ನಾನು ನಡೆಯಲು ಸಿದ್ದನಾಗಿ ಹೊರಟವನು, ಅವನ ಬಳಿ ಕಾರು ಇರಬಹುದೆಂದು ಯೋಚಿಸಲಿಲ್ಲ. ಇರಲಿ, ಈ ದಿನ ದುರ್ಗಿ ಕಾರಿನ ರಥವನ್ನೇರಿಸುತ್ತಿದ್ದಾಳೆ ಈ ದೇಹವನ್ನು ಅಂದುಕೊಳ್ಳುತ್ತ ಅವನ ಜೊತೆ ಕಾರು ಏರಿದೆ.

ಊರಿನ ಪ್ರಮುಖ ಬಾಗದಲ್ಲಿಯೆ ಇತ್ತು ಅವನ ಮನೆ. ಸುತ್ತಲೂ ವೈಭವ ಸೂಚಿಸುವ ಮನೆಗಳು, ಆದರೆ ಇವನ ಮನೆ ಮಾತ್ರ ಸರಳವಾಗಿಯೆ ಇತ್ತು. ಅಂತಹ ವೈಭವ ಏನೂ ಕಾಣಲಿಲ್ಲ. ಮನೆಯಲ್ಲಿ ಅವನ ಹೆಂಡತಿ, ಹಾಗೂ ತಾಯಿ ಇದ್ದರು. ನನ್ನನ್ನು ಅವರಿಗೆ ಪರಿಚಯ ಮಾಡಿಸಿದ. ಇಬ್ಬರ ಮುಖದಲ್ಲಿ ಸಂತಸವೆ ಕಂಡಿತು.

"ಸ್ವಾಮಿ, ನಾನು ಅಂಗಡಿಯ ಹತ್ತಿರ ಸ್ವಲ್ಪ ಹೋಗಿ ಬರಬೇಕು, ಬಾಗಿಲು ಹಾಕಿಸಿ ಬರುವಾಗ ಒಂದು ತಾಸು ಆಗಬಹುದು, ನೀವು ವಿಶ್ರಾಂತಿ ಪಡೆಯುತ್ತಿರಿ. ನಾನು ಬರುವೆನು, ನಂತರ ಒಟ್ಟಿಗೆ ಊಟ ಮಾಡಬಹುದು, ನಿಮಗೆ ಹಸಿದಿದ್ದರೆ, ನನ್ನನ್ನು ಕಾಯಲು ಹೋಗಬೇಡಿ, ನಿಮ್ಮನ್ನು ಬಿಟ್ಟು ಹೋಗುತ್ತಿರುವದಕ್ಕೆ ಕ್ಷಮಿಸಿ" ಎಂದ. ನಾನು, ನಗುತ್ತಲೆ, "ಇಲ್ಲ ನನಗೆ ಊಟದ ಆತುರವೇನು ಇಲ್ಲ. ನೀವು ನಿಮ್ಮ ಕೆಲಸವನ್ನೆಲ್ಲ ಮುಗಿಸಿ ಬನ್ನಿ. ನಾನು ವಿರಾಮವಾಗಿ ಕಾಯುತ್ತಿರುವೆ, ನನ್ನಿಂದ ನಿಮ್ಮ ಕೆಲಸಗಳಿಗೆ ತೊಂದರೆಯಾಗಬಾರದು ಅಷ್ಟೆ" ಎಂದೆ. ಅವನು ಅಲ್ಲಿಂದ ಹೊರಟು ಹೋದ.

ಆತನ ಪತ್ನಿ ಹೆಸರು ಲಕ್ಷ್ಮೀ ಎಂದು,ಆಕೆ ಹೇಳಿದಳು. "ಸ್ವಾಮಿ, ಕಾಲು ತೊಳೆಯುವದಿದ್ದರೆ, ಹಿಂದೆ ಜಾಗವಿದೆ, ಕುಡಿಯಲು ಏನು ಕೊಡಲಿ, ತಣ್ಣಗಿನ ಏನಾದರು ಕೊಡಲಾ, ಅಥವಾ ಕಾಫಿ   ಕುಡಿಯುತ್ತೀರ?" ಆಕೆಯ ಸೌಜನ್ಯ ನನಗೆ ಸಂತಸವೆನಿಸಿತು. "ನೀವು ಏನು ತಂದರು ತೊಂದರೆಯಿಲ್ಲ ತಾಯಿ,  ಕುಡಿಯುವೆ" ಎಂದೆ. ಆಕೆ ಒಳಗೆ ಹೋದಂತೆ, ಶ್ರೀನಿವಾಸನ ತಾಯಿ, ಹೆಸರು ಭಾಗ್ಯಮ್ಮ ಎಂದು ತಿಳಿಸಿದರು, ಆಕೆ ಪ್ರಶ್ನಿಸಿದರು, "ತಾವು ಎಲ್ಲಿಂದ ಬರುತ್ತಿರುವಿರಿ, ನನ್ನ ಮಗ ಹೇಗೆ ಪರಿಚಯವಾದ? ಯಾವ ಊರಿನವರು, ಹೆಸರು ಕೇಳಿದರೆ ಬೇಸರವೇನಿಲ್ಲ ತಾನೆ?"

"ಇಲ್ಲ ಬೇಸರವೇಕೆ, ನನ್ನ ಹೆಸರು ಯಾರಾದರು ಕೇಳಿಯೆ ಎಷ್ಟೊ ವರ್ಷವಾಯಿತು, ಲಕ್ಷ್ಮಣನೆಂದು ಕರೆಯುತ್ತಿದ್ದರು ನನ್ನನ್ನು ಎಲ್ಲರೂ.  ಉತ್ತರ ಭಾರತವನ್ನು ಸೇರಿ, ಹರಿದ್ವಾರದಲ್ಲಿ ನೆಲಸಿದ ಮೇಲೆ, ಸಾದು ಮಹಾರಾಜ್ ಎಂದೆ ಸಂಭೋದಿಸಿದರು. ಅದು ಅವರ ಆಚಾರ. ಇಲ್ಲಿ ಸ್ವಾಮಿ ಎನ್ನುವರು, ನೀವು ಏನು ಕರೆದರೂ ಸಂತಸವೇ, ಮತ್ತೆ ನಿಮ್ಮ ಮಗನ ಪರಿಚಯವೇನಿಲ್ಲ, ದುರ್ಗಾದೇವಾಲಯದ ಮುಂದೆ ಕುಳಿತಿದ್ದ ನನ್ನನ್ನು ಮನೆಗೆ ಕರೆತಂದರು. ಸಾಧುಗಳೆಂದರೆ ಸಮಾಜ ಹೆದರುವ ಕಾಲದಲ್ಲೂ ನಿಮ್ಮ ಮಗನ ಮನಸ್ಸು ನೋಡುವಾಗ ಸಂತಸವೆನಿಸುತ್ತದೆ" ಎಂದೆ .

ತಣ್ಣನೆಯ ನಿಂಬೆಯ ಶರಬತ್ ತಂದುಕೊಟ್ಟ ಶ್ರೀನಿವಾಸನ ಮಡದಿ, ರಾತ್ರಿಯ ಅಡುಗೆಗಾಗಿ ಅಡುಗೆ ಮನೆಯತ್ತ ತೆರಳಿದರು.

"ನನ್ನ ಮಗನ ಸ್ವಭಾವವೆ ಹಾಗೇ, ಚಿಕ್ಕವಯಸ್ಸಿನಿಂದಲೂ ಅದೇನೋ ಸಾಧು ಸಂತರು, ದೇವರೆಂದರೆ ಅವನಿಗೆ ಅದೇನೋ ಭಕ್ತಿ.  ಈಗಲು ಅಷ್ಟೇ, ಇಷ್ಟು ಐಶ್ವರ್ಯದ ನಡುವೆಯ ಕೆಸರಿನಮೇಲಿನ ಕಮಲ ಅನ್ನುವರಲ್ಲ ಆ ರೀತಿ ಬದುಕುತ್ತಿದ್ದಾನೆ. ಯಾವ ಭೋಗದಲ್ಲಿ ಆಸಕ್ತಿ ಇಲ್ಲ, ಲೋಕವಿರುದ್ದ ಸ್ವಭಾವ" ಭಾಗ್ಯಮ್ಮ ಮಾತನಾಡುವಾಗ ಅವರ ಮುಖದಲ್ಲಿ ಎಂತದೋ ಭಾವ.

"ಅಂಗಡಿಗೆ ಎಂದು ಹೋದರು, ಅಲ್ಲಿ ಕೆಲಸ ಮಾಡುತ್ತಿರುವರೆ ? ಯಾವ ಅಂಗಡಿ" ಎಂದೆ ಸುಮ್ಮನೆ ಲೋಕಾರೂಡಿ.

"ಕೆಲಸವೆ, ಅವನಿಗೆ ಕೆಲಸವೇಕೆ, ಸ್ವಾಮಿ, ಅವನೇ ನೂರಾರು ಜನರಿಗೆ ಅನ್ನ ಕೊಡುವ ಧಣಿ, ಬೇಕು ಅಂದರೆ ಅರ್ಧ ಊರನ್ನು ಕೊಳ್ಳಬಲ್ಲ ಧನ ಶಕ್ತಿ ಇದೆ, ಆದರೆ ಅದೇಕೋ ಯಾವುದರಲ್ಲಿಯು  ಆಸಕ್ತಿ ಇಲ್ಲದವನು" ಎಂದರು ಆಕೆ. ನನಗೆ ಕೊಂಚ ಆಶ್ಚರ್ಯವೆನಿಸಿತು. ಕೆಲವರ ಹುಟ್ಟು ಸ್ವಭಾವವೆ ಹಾಗೆ ಯಾವುದರಲ್ಲಿ ಬೆರೆಯುವುದಿಲ್ಲ, ಏನು ಬೇಕಿಲ್ಲದ ನಿರ್ಲಿಪ್ತ ಸ್ವಭಾವ ಹುಟ್ಟಿನಿಂದಲೆ ಬಂದಿರುತ್ತದೆ ಅನ್ನಿಸಿತು. ಆಕೆ ಮತ್ತೆ ಹೇಳಿದಳು "ಊರಿನ ಆಭರಣದ ಅಂಗಡಿ, ಅಲ್ಲದೆ, ಜವಳಿ ಮಳಿಗೆಗಳು ಇವೆ, ಕೆಲವು ಕಟ್ಟಡಗಳನ್ನು ಬಾಡಿಗೆಗೆ ಕೊಟ್ಟಿದೆ. ನ್ಯಾಯಮಾರ್ಗದಲ್ಲಿಯೆ ದುಡಿಯುತ್ತಿದ್ದರು, ಅಪಾರ ಹಣ ಹರಿದು ಬರುತ್ತಿದೆ. ಆದರೆ ಅವನು ಮಾತ್ರ ಯಾವುದನ್ನು ಅನುಭವಿಸುವದಿಲ್ಲ. ನನಗೆ ಏನು ಬೇಡ ಅನ್ನುತ್ತಾನೆ. ಅದನ್ನು ನೀವು ಒಂದು ಯೋಚನೆ ಎಂದು ಕರೆಯುವದಾದರೆ, ನಮ್ಮ ಮೊಮ್ಮಗನಿದ್ದಾನೆ ಲಕ್ಷ್ಮೀಶ ಎಂದು ಹೆಸರು, ಅಪ್ಪನಿಗೆ ಪೂರ್ತಿ ವಿರುದ್ದ ಸ್ವಭಾವ. ಸುಖಲೋಲುಪತೆಯಲ್ಲಿ ಆಸಕ್ತಿ, ಕೆಲಸದಲ್ಲಿ ಶ್ರದ್ದೆಯಿರದಿದ್ದರು, ಖರ್ಚುಮಾಡುವದರಲ್ಲಿ ಮಾತ್ರ ಯಾವ ಹಿಡಿತವು ಇಲ್ಲ. ಹಾಗೆ ದೈವವೆಂದರೆ ನಂಭಿಕೆಯು ಇಲ್ಲ, ದರ್ಮ ಸಂಸ್ಕೃತಿ ಎಂದರೆ ಅವನಿಗೆ ಆಡಿಕೊಳ್ಳುವ ವಿಷಯ, ಅವನದು ಇನ್ನೊಂದು ಯೋಚನೆಯಾಗಿದೆ, ಇಬ್ಬರ ಮನಸುಗಳು ಎಂದಿಗೂ ಜೊತೆ ಸೇರದೇನೊ ಎನ್ನುವ ಚಿಂತೆ ನನಗೆ, ನನ್ನ ಸೊಸೆಗೆ" ಆಕೆಯ ಮಾತು ಕೇಳಿ ಮೌನವಾದೆ. ಪ್ರಪಂಚದಲ್ಲಿ ಎಲ್ಲಿ ಹೋದರು ಇದೇ ಘರ್ಷಣೆಯೆ ಅನ್ನಿಸಿತು. ನನ್ನ ಮೌನ ನೋಡುತ್ತ ಆಕೆಯು ಮೌನವಾಗಿ ಕುಳಿತರು. 

ಸ್ವಲ್ಪ ಕಾಲವಾಯಿತೇನೊ, ಹೊರಗಿನಿಂದ ಹದಿನೆಂಟರ ಹುಡುಗನೊಬ್ಬ ಒಳಬಂದ ನೋಡುವಾಗಲೆ ಅನ್ನಿಸಿತು, ಇವನೆ ಲಕ್ಷ್ಮೀಶ ಶ್ರೀನಿವಾಸನ ಮಗ ಎಂದು. ಅವನು ವರಾಂಡದಲ್ಲಿ ಕುಳಿತಿದ್ದ ಅವರ ಅಜ್ಜಿಯತ್ತ ನಂತರ ನನ್ನತ್ತ ನೋಡಿದ. ಅವನ ಮುಖದಲ್ಲಿ ಒಂದು ಅಲಕ್ಷದ ಅವಹೇಳನದ ನಗೆಯೊಂದು ಹಾದು ಹೋಯಿತು. 

ಅವನ ಅಜ್ಜಿ ಕೂಗಿದರು, "ಮಗು ಲಕ್ಷ್ಮೀಶ ಇಲ್ಲಿ ಬಾಪ್ಪ, ನೋಡು ಬಾ. ನಿಮ್ಮ ತಂದೆ ಇಂದು ವಿಶೇಷ ಅತಿಥಿಯೊಬ್ಬರನ್ನು ಕರೆತಂದಿದ್ದಾರೆ, ಅವರ ಅಶೀರ್ವಾದ ಪಡಿ" ಅವನು ನಿಧಾನವಾಗಿ ನಡೆಯುತ್ತ ಇತ್ತ ಬಂದ, ನನ್ನನ್ನು ನೋಡಿ, ಅವರ ಅಜ್ಜಿಗೆ ಹೇಳಿದ "ಗೊತ್ತಾಯಿತು  ಬಿಡಜ್ಜಿ, ದುರ್ಗಾಗುಡಿಯ ಮುಂದೆ ಕುಳಿತ್ತಿದ್ದವರು, ಸಾಧು ಇರಬೇಕಲ್ಲವೆ, ಇವರ ಬಟ್ಟೆ ನೋಡಿದಾಗಲೆ ತಿಳಿಯುತ್ತಿದೆಯಲ್ಲ". ಅವನ ಮುಖದಲ್ಲಿ ಕುಹಕದ ನಗು. "ಅಂದರೆ ನಿಮ್ಮ ಅಪ್ಪ ಶ್ರೀನಿವಾಸ ನಿನಗೆ ಸಿಕ್ಕಿದ್ದನಾ, ಹೇಳಿದನಾ ದುರ್ಗಾಗುಡಿಗೆ ಹೋಗಿದ್ದು" ಆಕೆ ಕೇಳಿದಳು. "ಅಪ್ಪ ಸಿಕ್ಕಲಿಲ್ಲ ಅಜ್ಜಿ. ಆದರೆ ಇದೇನು ಮೊದಲಲ್ಲವಲ್ಲ, ಶುಕ್ರವಾರ ಬಂತು ಅಂದರೆ ಅಪ್ಪಾಜಿ ಅಲ್ಲಿಗೆ ಹೋಗುವರು ಎನ್ನುವುದು ತಿಳಿದಿದೆ, ಅಲ್ಲಿ ಯಾರಾದರು ಸಿಕ್ಕರೆ ಸಾಕು ಕಾಲಿಗೆ ಬಿದ್ದು ಕರೆತರುವರು, ಮನೆಯನ್ನು ಮಠ ಮಾಡಲು ಹೊರಟಿರುವರು" ಎಂದ ಅಸಮಾಧಾನದಿಂದ."ಏಕಪ್ಪ ಹೀಗೆ ಆಡುವೆ, ದೊಡ್ಡವರಿಗೆ ಬೇಸರವಾಗುವ ಹಾಗೆ ಮಾತನಾಡುವುದು ಸರಿಯೇ, ನಿನ್ನ ಮಾತಿನಿಂದ ಸ್ವಾಮಿಗಳಿಗೆ ಬೇಸರವಾಗುವದಿಲ್ಲವೆ?" ಆಕೆ ನೊಂದು ನುಡಿದರು.

ನನಗೆ ಏಕೊ ಈ ರೀತಿಯ ಯುವಕರನ್ನು ಕಾಣುವಾಗ ಬೇಸರ ಎನಿಸುವದಿಲ್ಲ,  ಮನುಷ್ಯನ ಎಲ್ಲ ಮುಖಗಳು ಅನಾವರಣಗೊಳ್ಳುತ್ತಿದ್ದರೆ, ಅದನ್ನು ಅರಿಯುತ್ತ ಹೋಗುವದರಲ್ಲಿ ಎಂತದೋ ಆಸಕ್ತಿ.  ನಾನು ಆ ಯುವಕನನ್ನು ಪ್ರಶ್ನಿಸಿದೆ. "ಹಾಗೇಕೆ ಭಾವಿಸುವೆ ಮಗು, ನಿಮ್ಮ ತಂದೆಯವರ ಕರೆಯ ಮೇರೆಗೆ ನಾನು ಇಲ್ಲಿಗೆ ಬಂದಿರುವೆ ಅಷ್ಟೆ, ಮನೆ ಏಕೆ ಮಠವಾಗಬೇಕು, ಮಠದಲ್ಲಿರುವ ಸಾಧುವಿಗೆ ಒಂದು ದಿನ ಮನೆಯ ಅತಿಥ್ಯ ಅಷ್ಟೆ, ಮನೆ ಎಂದಿಗೂ ಮನೆಯೆ ಅಲ್ಲವೆ?" ಅವನು ನನ್ನನ್ನು  ಅಸಮಾದಾನದಿಂದ ದಿಟ್ಟಿಸಿದ. "ಇರಬಹುದು, ಆದರು ಮಠದಲ್ಲಿರುವರು ಮನೆಗಳಿಗೆ ಬರುವ ಅಗತ್ಯವೇನಿದೆ, ಮನೆ ಬೇಡವೆಂದಲ್ಲವೆ ಎಲ್ಲವನ್ನು ತೊರೆದು ಮಠ ಸೇರುವುದು, ಮತ್ತೆ ಮನೆಯ ಬಗ್ಗೆ ವ್ಯಾಮೋಹ ಏತಕ್ಕೆ" ಎಂದ. ನಾನು ಜೋರಾಗಿ ನಕ್ಕುಬಿಟ್ಟೆ. "ಆಯಿತಪ್ಪ, ಹೀಗೆ ಮನೆಯಲ್ಲಿರುವರು ಮನೆ ಬೇಸರ ಎಂದು ಮಠಕ್ಕೆ ಬರುವದಿಲ್ಲವೆ, ಹಾಗೆ ನಾವು ಮಠದಲ್ಲಿರುವರು ಮಠ ಬೇಸರ ಎಂದು ಒಂದು ಸ್ವಲ್ಪ ಕಾಲ ಮನೆಗೆ ಬರುವೆವು ಎಂದಿಟ್ಟಿಕೊ. ಅಷ್ಟಕ್ಕು ನಾನು ಮನೆಗೆ ಸೇರಿದವನಲ್ಲ ಮಠಕ್ಕು ಸೇರಿದವನಲ್ಲ, ಕೇವಲ ಪ್ರಪಂಚಕ್ಕೆ ಸೇರಿದವನು. ಅಷ್ಟಕ್ಕು ನಿನಗೆ ಮಠ, ಸನ್ಯಾಸಿ ಎಂದರೆ ಏತಕ್ಕೆ ದ್ವೇಷ" ಎಂದೆ.

ಅವರ ಅಜ್ಜಿ ಗಾಭರಿಯಾಗಿದ್ದಳು. "ಲಕ್ಷ್ಮೀಶ, ನೀನು ಏನೊ ಮಾತನಾಡುತ್ತಿ, ಅದು ಇನ್ನೆಲ್ಲಿಗೊ ಹೋಗುತ್ತೆ, ನೀನು ಎದ್ದು ಒಳಗೆ ಹೋಗು, ಕಾಲು ತೊಳೆದು ಊಟಮಾಡುಹೋಗು" ಎಂದಳು. ನಾನು ನಗುತ್ತ,"ಇರಲ್ಲಿ ಬಿಡಿ ಅಮ್ಮ, ಅವನು ಮನಸಿನಲ್ಲಿರುವದನ್ನು ಮಾತನಾಡಿದ ತಪ್ಪೇನಿದೆ, ನನಗಾವ ಬೇಸರವು ಇಲ್ಲ, ಅವನ ಪ್ರಶ್ನೆಗೆ ಉತ್ತರಿಸಲು ಪ್ರಯತ್ನಪಡೋಣ" ಎಂದೆ.

ಲಕ್ಷ್ಮೀಶ ಸುಮ್ಮನೆ ಕುಳಿತಿದ್ದವನು ನುಡಿದ."ನನಗೆ ದ್ವೇಶವೆ?, ಚಿಕ್ಕವಯಸಿನಿಂದಲು ಅಷ್ಟೆ, ಅಪ್ಪ ಸದಾ ದೇವಾಲಯ, ಮಠ, ಎಂದು ಸುತ್ತುತ್ತಲೆ ಇರುತ್ತಾರೆ, ಊರಿನ ಉಳಿದ ವ್ಯಾಪಾರಸ್ಥರೆಲ್ಲ, ವ್ಯವಹಾರ ಬೆಳೆಸಲು, ಆಸ್ತಿ ಮಾಡಲು ನೋಡಿದರೆ ಇವರು, ಎಲ್ಲಿಗೆ ದಾನ ಕೊಟ್ಟೇನು, ಯಾವ ಸ್ವಾಮಿಯನ್ನು ಕರೆದೇನು ಅನ್ನುತ್ತಾರೆ. ಇವರಿಗೆ ಇರುವ ಹಣದಲ್ಲಿ ಹೇಗಿರಬಹುದು, ತಾತ ಕಟ್ಟಿದ ಈ ಮನೆಯಲ್ಲಿ ಗತಿ ಇಲ್ಲದವರಂತೆ ಇರುತ್ತಾರೆ, ಒಂದು ಹಳೆಯ ಸೆಕೆಂಡ್ ಹ್ಯಾಂಡ್ ಕಾರಿನ ಹೊರತು  ಓಡಾಡಲು ಏನು ಇಲ್ಲ, ಇರುವದನ್ನು ಅನುಭವಿಸಲು ಯೋಗ್ಯತೆ ಇಲ್ಲ, ಯಾವಾಗಲು ವೈರಾಗ್ಯದ ಮಾತುಗಳು ಉಪದೇಶಗಳು, ನನಗಂತು ತಲೆ ಕೆಡುತ್ತದೆ, ಹಾಳಾಗಲಿ ನನಗಾದರು ಕೇಳಿದ್ದು ಕೊಡಿಸುತ್ತಾರ, ಇಲ್ಲ, ಸಮಯಕ್ಕೆ ಕಾಯಬೇಕಂತೆ, ಕಾಯುವ ಹೊತ್ತಿಗೆ ನನ್ನ ಆಯಸ್ಸೆ ಮುಗಿದಿರುತ್ತದೆ ಅಷ್ಟೆ, ಸಾದು ಎಂದರೆ ಕಾಲಿಗೆ ಬಿದ್ದು ಹಣ ಸುರಿಯುವ ಇವರಿಗೆ, ಮಗ ಕೇಳಿದರೆ ಪ್ರತಿ ರುಪಾಯಿ ಸಹ ಲೆಕ್ಕ" ಎಂದ ಗಟ್ಟಿಯಾಗಿ. "ಅಯಸ್ಸು ಮುಗಿಯುವ ಮಾತು ಏಕಪ್ಪ ಸಂಜೆ ಸಮಯ, ನೀನು ಇನ್ನು ಚಿಕ್ಕ ಪುಟ್ಟವನು"  ಅವನ ಅಜ್ಜಿ ಕಣ್ಣಲ್ಲಿ ನೀರು ತುಂಬಿದರು, ಅಡುಗೆ ಮನೆಯಲ್ಲಿದ್ದ, ಅವನ ಅಮ್ಮ ಹೊರಬಂದು, ಆತಂಕದಿಂದ ನಿಂತರು.

ಆ ಹುಡುಗನ ಮನದಲ್ಲಿರುವ ಗೊಂದಲ, ಅಸಮಾಧಾನ ನನಗೆ ಅರ್ಥವಾಗಿತ್ತು. "ನಿನ್ನ ದುಗುಡ ನನಗೆ ಅರ್ಥವಾಯಿತು ಮಗು, ನಿಮ್ಮ ತಂದೆ ತಮ್ಮ ದುಡಿತವನ್ನು ಸುಖಕ್ಕೆ ಉಪಯೋಗಿಸದೆ ಬರೀ, ಈ ರೀತಿ ಸಾಧುಗಳು ಮಠ,  ದೇವಾಲಯ ಎಂದು ಖರ್ಚು ಮಾಡುತ್ತಾರೆ ಎಂದಲ್ಲವೆ, ನಿನಗೆ ಬೇಸರ?" ಅದಕ್ಕೆ ಲಕ್ಷ್ಮೀಶ "ಅಲ್ಲದೆ ಮತ್ತೇನು, ತಮ್ಮ ದುಡಿತದಲ್ಲಿ ಒಂದು ಸಿನಿಮಾ ಬೇಡ, ಮನೋರಂಜನೆ ಬೇಡ, ಮನಸಿಗೆ ಸುಖಬೇಡ, ಅನ್ನುವದಾದರೆ ಏಕೆ ದುಡಿಯಬೇಕು, ನಾನು ಒಂದು ಸಿನಿಮಾ ನೋಡಲು ಹೋದರೆ, ಕ್ರಿಕೇಟ್ ಮ್ಯಾಚಿಗೆ ಹೋದರೆ  ಖರ್ಚು ಅನ್ನುವ ಇವರು, ದಾನ ಧರ್ಮ ಅಂತ ಖರ್ಚು ಮಾಡಬಹುದೊ" ಎಂದ. "ಸರಿಯಪ್ಪ, ನೀನು ಅನ್ನುವುದು ಸರಿಯೆ ಇದೆ, ನಾವು ದುಡಿದಮೇಲೆ, ನಮ್ಮ ಮನಸಿಗೆ ಸರಿ ಅನ್ನಿಸುವ ಹಾಗೆ ಖರ್ಚು ಮಾಡಬೇಕು ಅಲ್ಲವೆ. ನಿನಗೆ ಸಿನಿಮಾದಿಂದ, ಕ್ರಿಕೇಟಿನಿಂದ ಖುಷಿ ದೊರಕುವಂತೆ, ನಿಮ್ಮ ತಂದೆಗೆ ಮಠ, ಅಥವ ದೇವರಿಂದ, ಸಾಧುಗಳ ಸಹವಾಸದಿಂದ ಸುಖ ದೊರಕುತ್ತಿದೆ ಎಂದು ಭಾವಿಸು, ನೀನು ಖರ್ಚು ಮಾಡುವ ರೀತಿಯಲ್ಲಿ, ಅವರು ಸಹ ತಮ್ಮ ಸುಖಕ್ಕೆ , ಮನಸಿನ ಸಂತಸಕ್ಕೆ  ಖರ್ಚು ಮಾಡುತ್ತಿರುವರು ಅಂದುಕೊ ಆಗದೆ ?" ಎಂದೆ ನಗುತ್ತ.

ಲಕ್ಷ್ಮೀಶ ಸ್ವಲ್ಪ ತಡವರಿಸಿದ, ಅವನು ಈ ರೀತಿಯ ಉತ್ತರ ನಿರೀಕ್ಷಿಸಿರಲಿಲ್ಲ ಅನ್ನಿಸುತ್ತೆ, ಅಥವ ನಾನು ಕೋಪಗೊಳ್ಳುವೆ ಎಂದು ನಿರೀಕ್ಷಿಸಿದ್ದ ಅನ್ನಿಸುತ್ತೆ. ಅವರ ಅಮ್ಮ ಮಾತ್ರ ಗಡಿಬಿಡಿಯಿಂದ ಹೊರಬಂದರು."ಸ್ವಾಮಿ ಕ್ಷಮಿಸಿ, ಅವನು ಸ್ವಲ್ಪ ಹುಡುಗಾಟಿಕೆ ಸ್ವಭಾವ, ಮನಸಿಗೆ ಅನ್ಯಥಾ ಭಾವಿಸಬೇಡಿ" ಎಂದು ಕೈಮುಗಿದು, "ಲಕ್ಷ್ಮೀಶ ನೀನು ಎದ್ದು ಒಳ ನಡಿ, ನಿನಗೆ ದೊಡ್ಡವರ ಜೊತೆ ಹೇಗೆ ವರ್ತಿಸುವುದು ಅಂತ ತಿಳಿದಿಲ್ಲ" ಎಂದರು.

ನಾನು ಮತ್ತೆ ತಡೆದೆ, ನನಗೆ ಈ ಹುಡುಗನ ಮನದಲ್ಲಿ ಇನ್ನು ಏನೇನು ಭಾವ ಅಡಗಿರಬಹುದೆಂಬ ಕುತೂಹಲ. "ಇರಲಿ ಬಿಡಿ ಅಮ್ಮ, ನೀವು ಹೆದರದಿರಿ, ನಿಮ್ಮ ಮಗನ ಮಾತುಗಳು ಚಿಂತಿಸಲು ಯೋಗ್ಯವಾಗಿಯೆ ಇದೆಯಲ್ಲವೆ, ಅದಕ್ಕೆ ಉತ್ತರ ಕೊಡುವುದು ದೊಡ್ಡವರಾದ ನಮ್ಮ ಕರ್ತ್ಯವ್ಯ" ಎಂದೆ. ಅದಕ್ಕವಳು, "ಇಲ್ಲ ಸ್ವಾಮಿ, ಅವನದು ಅತಿಯಾದ ಮಾತು, ವಿನಯವಿಲ್ಲ, ಮತ್ತೇನಾದರು ನುಡಿದರೆ ಅಂತ ನನಗೆ ಭಯ " ಎಂದಳು. ನಾನು ನಗುತ್ತ "ಇರಲಿ ಬಿಡಮ್ಮ, ಅವನು ಏನು ನುಡಿದರು ಚಿಂತಿಸದಿರು, ಇಂದು ನಿನ್ನ ಕೈಯ ಅನ್ನದ ಋಣದಲ್ಲಿರುವೆ, ನಿನ್ನ ಮಗನನ್ನು ಶಪಿಸಲಾರೆ, ಬೇಸರವು ಪಡಲಾರೆ, ನೀನು ನೆಮ್ಮದಿಯಾಗಿರು" ಎಂದೆ.

ಮತ್ತೆ ಲಕ್ಷ್ಮೀಶನತ್ತ ತಿರುಗಿ, "ಹೇಳು ಮಗು ನಾನು ಹೇಳಿದ್ದು ಸರಿ ಅಲ್ಲವೆ, ನಿಮ್ಮ ತಂದೆ ಅವರ ಸುಖಕ್ಕೆ  ಸಂತಸಕ್ಕೆ ಖರ್ಚು ಮಾಡುತ್ತಿಲ್ಲವೆ?" ಎಂದೆ. "ಇರಬಹುದು, ನೀವು ಹೇಳುವದನ್ನು ಒಪ್ಪಿದರು, ಅವರ ಭಾವನೆಯನ್ನು ನಮ್ಮ ಮೇಲೆಲ್ಲ ಏಕೆ ಹೊರೆಸಬೇಕು, ಇರಲು ಒಳ್ಳೆಯ ಮನೆಬೇಡ, ವಾಹನ ಬೇಡ, ಬಟ್ಟೆ ಬೇಡ, ಯಾವ ಸುಖವು ಬೇಡ ಅನ್ನುವದಾದರೆ, ಇದೆಂತಹ ಜೀವನ. ನನ್ನ ಜೊತೆ ಇರುವವರು ಹೇಗಿರುವರು ಗೊತ್ತೆ? ನಾನು ಇವರೆದುರಿಗೆ ಪ್ರತಿ ರುಪಾಯಿಗೂ ನಿಂತು ಬೇಡಬೇಕು, ಮಾತು ತೆಗೆದರೆ ಬರಿ ಉಪದೇಶ, ಹೋಗಲಿ ಅವರಿಗೆ ಖರ್ಚು ಮಾಡುವರ ಅಂದರೆ ಯಾವುದರಲ್ಲು ಆಸೆಯೆ ಇಲ್ಲದವರು ಅವರು, ಅವರ ರಾಗಕ್ಕೆ ತಾಳ ಹಾಕುವ ಅಮ್ಮ "

ಅಪ್ಪ ಅಮ್ಮ ಸೇರಿ ಹುಡುಗನ ಮೇಲೆ ತಮ್ಮ ಭಾವನೆ ಅತಿಯಾಗಿ ಹೊರೆಸಿದ್ದಾರೆ ಅನ್ನಿಸಿತು. "ಸರಿ ಮಗು, ನಿಮ್ಮ ತಂದೆಯವರ ಸ್ವಭಾವವೆ ಅದಿರಬಹುದು, ನೀನು ಅವರಿಗೆ ಸ್ವಲ್ಪ ಹೊಂದಿಕೊಳ್ಳಬೇಕು, ಬಹುಷಃ ಆಸೆಯೆ ದುಃಖಕ್ಕೆ ಮೂಲ ಎನ್ನುವ ಬುದ್ದನ ಭೋದನೆಯನ್ನು ನಿಮ್ಮ ತಂದೆ ನಂಬಿ ಅನುಸರಿಸುತ್ತಿರಬಹುದು, ಹಾಗಾಗೆ ಅವರಿಗೆ ಯಾವುದೆ ಆಸೆ ಇಲ್ಲ ಅಂದುಕೊ ಆಗದೆ" ನಾನು ಹುಡುಗನನ್ನು ಸ್ವಲ್ಪ ಕೆದಕಿದೆ, ಅವನ ಮುಖದಲ್ಲಿ ಕುಹಕದ ನಗುವೊಂದು ಕಾಣಿಸಿತು.

"ಆಸೆಯೆ ದುಃಖಕ್ಕೆ ಮೂಲ, ಸರಿಯಾದ ಮಾತು ಹೇಳುತ್ತಿರುವಿರಿ, ಮಲಗುವನಿಗೆ ಹಾಸಿಗೆ ಹಾಸಿ ಕೊಟ್ಟಂತೆ, ಆದರೆ ಅವರು ಇರುವುದು ವ್ಯಾಪಾರ ಕ್ಷೇತ್ರದಲ್ಲಿ ಸ್ವಾಮಿ, ಈಗ ಕಾಲ ಬದಲಾಗಿದೆ, ಬುದ್ದನ ಮಾತನ್ನು ನಾವು ಬೇರೆ ರೀತಿ ಹೇಳಬೇಕಾಗಿದೆ, ಸ್ವಲ ಹಣ ಸುಖ ಬರುವದಾದರೆ, ಆಸೆ ನೆರವೇರಬಹುದಾದರೆ, ದುಃಖ ತಾನೆ ಆಗಲಿ ಬಿಡಿ, ತಪ್ಪೇನು ?" ಎಂದ. ನಾನು ಬೆಚ್ಚಿ ಬಿದ್ದೆ, ಇದೇನು ಹೊಸ ವಾದ.ಮತ್ತೆ ಕೇಳಿದೆ "ಇದೇನು ನಿನ್ನ ಹೊಸ ರೀತಿಯ ಮಾತು, ದುಃಖ ಆಗಲಿ ಬಿಡಿ ಅನ್ನುತ್ತಿರುವೆಯಲ್ಲ, ಮತ್ತೆ ವಿವರಿಸು" ಎಂದೆ. ಅವನಲ್ಲಿ ಎಂತದೊ ಹುರುಪು, "ಇನ್ನೇನು? , ವ್ಯಾಪಾರದಲ್ಲಿರುವರು ಚಿಂತಿಸಬೇಕಾದ ರೀತಿಯೆ ಬೇರೆ, ಯಾವಾಗಲೊ, ಯಾರಿಗೊ ದುಃಖವಾಗುತ್ತೆ ಅಂತ ಕುಳಿತರೆ, ಆಸೆ ನೆರವೇರುವದಾದರು ಹೇಗೆ, ದುಃಖಕ್ಕೆ ಹೆದರಿ ಆಸೆಯನ್ನೆ ತೊರೆದ ಬುದ್ದ ಮಾತುಗಳು ಈಗ ರುಚಿಸವು, ಅಷ್ಟಕ್ಕು ಯಾರ ಆಸೆಯಿಂದ ಯಾರಿಗೆ ದುಃಖವಾಗುತ್ತೆ ಅನ್ನುವದನ್ನು ನೋಡಬೇಕಲ್ಲವೆ, ಈಗ ನೀವೆ ನೋಡಿ, ನಿಮ್ಮ ಆಸೆ ನೆರವೇರಬೇಕು ಅಂದರೆ ನನಗೆ ಸ್ವಲ್ಪ ದುಃಖವಾಗಬೇಕು ಅಲ್ಲವೆ, ಹಾಗಂತ ನಿಮ್ಮ ಆಸೆಯನ್ನು ಬಿಡುವಿರ?"

ನನಗೆ ಆಶ್ಚರ್ಯ, ಸುತ್ತಿ ಸುತ್ತಿ ನನಗೆ ತಂದನಲ್ಲ, ನನ್ನ ಯಾವ ಆಸೆ ಇವನ ದುಃಖಕ್ಕೆ ಮೂಲ ಅರ್ಥವಾಗದೆ ಕೇಳಿದೆ, "ನಿನ್ನ ಮಾತು ನನಗೆ ಅರ್ಥವಾಗಲಿಲ್ಲ, ಲಕ್ಷ್ಮೀಶ, ನನ್ನ ಯಾವ ಆಸೆ ನಿನ್ನ ದುಃಖಕ್ಕೆ ಕಾರಣವಾಗಬಹುದು?"

ನಗುತ್ತ ನುಡಿದ "ಅದು ಹಾಗೆ, ಈಗ ನೋಡಿ, ನಮ್ಮ ತಂದೆ ನಿಮ್ಮನ್ನು ಕರೆತಂದಿರುವರು, ನೀವಾಗೆ ಬರಲಿಲ್ಲ ಎಂದೆ ಭಾವಿಸಿರಿ, ಒಟ್ಟಿನಲ್ಲಿ ಅವರ ಕೋರಿಕೆಯ ಮೇಲೆ ಬಂದಿರಿ, ಈಗ ನಿಮ್ಮ ಮನದಲ್ಲಿ ಒಂದು ಉದ್ದೇಶವಿರುತ್ತೆ, ಹೇಗಾದರು ಸರಿ ಇವರ ಬಳಿ, ಸ್ವಲ್ಪ ಕಾಣಿಕೆಯ ರೂಪದಲ್ಲಿ ಹಣವನ್ನೊ ಏನಾದರು ಪಡೆದು ಹೋಗಬಹುದು ಎಂದು, ನಿಮ್ಮ  ಈ ಆಸೆ ನನ್ನ ದುಃಖಕ್ಕೆ ಕಾರಣವಲ್ಲವೆ, ಅಂದರೆ, ನಮ್ಮ ತಂದೆ ವ್ಯರ್ಥವಾಗಿ ಹಣ ವ್ಯಯ ಮಾಡುವರೆಂಬ ದುಃಖಕ್ಕೆ ಕಾರಣವಲ್ಲವೆ?"

ಅವನ ಮಾತಿಗೆ, ಅವನ ಅಜ್ಜಿ ಗಾಭರಿಯಾದಳು, ಅವರ ತಾಯಿ, "ಲಕ್ಷ್ಮೀಶ ನಿನ್ನದು ಅತಿಯಾಯಿತು, ಒಳಗೆ ನಡಿ, ನಿಮ್ಮ ತಂದೆ ಬರಲಿ ಇರು ಹೇಳುವೆ " ಎಂದಳು.

ನನ್ನ ಮನ ಶಾಂತವಾಗಿತ್ತು, ಹೇಳಿದೆ "ಮಗು ಲಕ್ಷ್ಮೀಶ, ನಿನ್ನ ಮಾತು ನಿಜ, ಒಮ್ಮೆ ನಾನು ಆರೀತಿ ಹಣಕ್ಕೆ ಆಸೆ ಬಿದ್ದರೆ, ಅದು ನಿನ್ನ ದುಃಖಕ್ಕೆ ಕಾರಣವಾಗಬಹುದು, ಸತ್ಯವಾದ ಮಾತು. ಆದರೆ ನಾನಿಲ್ಲಿ ಯಾವುದೆ ಹಣದ ಅಥವ ಯಾವುದೇ ನಿರೀಕ್ಷೆಯಿಂದ ಬರಲಿಲ್ಲ, ನಿಮ್ಮ ತಂದೆಯವರು ರಾತ್ರಿ ಮನೆಯಲ್ಲಿದ್ದು ಊಟ ಸ್ವೀಕರಿಸಿ ಎಂದರು, ಅದೊಂದೆ ನಿರೀಕ್ಷೆ ಇರುವುದು. ಆದರೆ, ಅದು ತಪ್ಪಿದರೂ ನನಗಾವ ದುಃಖವು ಇಲ್ಲ, ನಾನು ಊಟವಿಲ್ಲದ ರಾತ್ರಿಗಳನ್ನು ಬಹಳ ಕಳೆದಿರುವೆ,  ಭೂಮಿ ಆಕಾಶಗಳೇ ಮನೆ ಎಂದು ಕಳೆದ ಅನುಭವ ಸಾಕಷ್ಟಿದೆ. ಆದರೆ ಈಗ ನಾನು ನಿಮ್ಮ ತಂದೆಯವರ ಬಳಿ ನಾನು ಹಣಪಡೆಯಬಹುದು ಎನ್ನುವ ನಿನ್ನ ನಿರೀಕ್ಷೆಯ ಭಾವ ನಿನ್ನಲ್ಲಿ ದುಃಖ ಉಂಟುಮಾಡುತ್ತಿದೆ. ಅದು ಕಲ್ಪಿತ ಭಾವ, ನೋಡು ಕಲ್ಪಿತ ಒಂದು ಭಾವವೆ ನಿನ್ನಲ್ಲಿ ಎಂತ ದುಃಖ ತರುತ್ತಿದೆ, ಅದೆ ವ್ಯಾಮೋಹ, ಹಣದ ಬಗ್ಗೆ ನಿನಗಿರುವ ವ್ಯಾಮೋಹದ ಕಾರಣದಿಂದ ನಿನಗೆ ಆಗುತ್ತಿರುವ ದುಃಖ, ಗೌತಮ ಬುದ್ದ ಹೇಳಿದ್ದು ಇದನ್ನೆ ಅಲ್ಲವೆ ?" ಎಂದೆ.

ಲಕ್ಷ್ಮೀಶನ ಮುಖ ಸ್ವಲ್ಪ ಗಂಭೀರವಾಯಿತು. ಅವನು ಏನು ಉತ್ತರ ಕೊಡುತ್ತಿದ್ದನೊ, ಅಷ್ಟರಲ್ಲಿ ಅವನ ತಂದೆ ಶ್ರೀನಿವಾಸ  ಬಂದನು.  


(ಮುಂದುವರೆಯುವುದು)

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

12 Comments
Oldest
Newest Most Voted
Inline Feedbacks
View all comments
sharada moleyar
sharada moleyar
10 years ago

nice stpry..

parthasarathyn
parthasarathyn
10 years ago

thanks 🙂

ಹಿಪ್ಪರಗಿ ಸಿದ್ದರಾಮ್
ಹಿಪ್ಪರಗಿ ಸಿದ್ದರಾಮ್
10 years ago

ಕಥೆ ಚೆನ್ನಾಗಿದೆ…

parthasarathyn
parthasarathyn
10 years ago

ತುಂಬಾ ವಂದನೆಗಳು

ಹೃದಯಶಿವ
ಹೃದಯಶಿವ
10 years ago

ಇಷ್ಟವಾಯ್ತು…

parthasarathyn
parthasarathyn
10 years ago

ನಿಮಗೆ ಇಷ್ಟವಾಗಿದ್ದು ನನಗೆ ಇಷ್ಟವಾಯಿತು 🙂

ಪ್ರಶಾ೦ತ ಕಡ್ಯ

ತು೦ಬಾ ಚೆನ್ನಾಗಿದೆ. "ಮು೦ದುವರೆಯುವುದು" ಅನ್ನುವುದರ ಬದಲು ಪೂರ್ಣ ಕಥೆಯಿರುತ್ತಿದ್ದರೆ ಚೆನ್ನಾಗಿತ್ತು.

parthasarathyn
parthasarathyn
10 years ago

ವಂದನೆಗಳು,
ಒಟ್ಟಿಗೆ ಹಾಕಬಹುದಿತ್ತು ಆದರೆ ಕತೆ ಕೊಂಚ ದೀರ್ಘವಾಗುತ್ತಿತ್ತು ಹಾಗಾಗಿ ಬಾಗಗಳಲ್ಲಿ  ಹಾಕಿದೆ 
ತಮ್ಮ ಮೆಚ್ಚುಗೆಗೆ ವಂದನೆಗಳು

GAVISWAMY
10 years ago

very nice sir..
ಚಿಂತನೆಗೆ  ಹಚ್ಚುವ ಕತೆ..
wtng for next part..
 

parthasarathyn
parthasarathyn
10 years ago

ವಂದನೆಗಳು ಗವಿಸ್ವಾಮಿಯವರಿಗೆ ಮೆಚ್ಚುಗೆಗೆ ನಮನ  ನಾನಂತು ಎಲ್ಲ ಭಾಗಗಳನ್ನು ಪಂಜುವಿಗೆ ಕೊಟ್ಟುಬಿಟ್ಟಿದ್ದೇನೆ 🙂 

 

Utham Danihalli
10 years ago

Kathe estavaythu mundina bhagakagi kayuthidhene

trackback

[…] [ಹಿಂದಿನ ಭಾಗ ಓದಲು ಇಲ್ಲಿ ಕ್ಲಿಕ್ಕಿಸಿ] […]

12
0
Would love your thoughts, please comment.x
()
x