ಒಂದು ತಂತಿ ಪರ್ಸಂಗ …. ! : ಶ್ರೀಕಾಂತ್ ಮಂಜುನಾಥ್

ಐದು ಮಂದಿ ಹಳ್ಳಿಕಟ್ಟೆಯಲ್ಲಿ ಬೀಡಿ ಸೇದುತ್ತಾ ಲೋಕಾಭಿರಾಮವಾಗಿ ಮಾತಾಡುತ್ತ ಕುಳಿತಿದ್ದರು… 
 
"ನೀನು ಏನೇ ಹೇಳು.. ಈ ಪರ್ಪಂಚದಲ್ಲಿ ಏಟೊಂದು ಬದಲಾವಣೆ ಆಗಿ ಬಿಡ್ತು!"
 
"ಹೌದು ಕಣಣ್ಣ..  ಮೊದ್ಲು ಮೊದ್ಲು ಒಬ್ಬರನ್ನ ಒಬ್ಬರು ಭೇಟಿ ಮಾಡೋಕೆ ಆನಾಡಿ ಕಷ್ಟ ಪಡ್ತಾ ಇದ್ವಿ.. ಈಗ ಎಲ್ಲಾ ಚಿಟಿಕೆ ಚಿಟಿಕೆ ಹೊಡೆಯೋದರಲ್ಲಿ ಮುಗಿಯುತ್ತೆ"
 
"ಗುರುವೇ ನಿನಗೆ ಗೊತ್ತಾ… ಈ ಟೆಲಿಗ್ರಾಂ ಅಂದ್ರೆ ತಂತಿ ಸೇವೆ ಐತಲ್ಲ ಅದನ್ನ ನಿಲ್ಲಿಸಿ ಬಿಡ್ತಾರಂತೆ.. ಈ ತಂತಿ ಸೇವೆ ಬಗ್ಗೆ ನಿನ್ನ ಅನುಭವ ಹೇಳ್ರಣ್ಣಾ!"
 
"ಓಹ್ ಹೌದಾ.. ಅದರ ಬಗ್ಗೆ ಪಸಂದಾಗಿ ನಡೆದ ಒಂದು ಅನುಭವ ಐತೆ … ನಮ್ಮ ಸ್ನೇಹಿತ ರಾಮನಗರದ ವೆಂಕಿ ಗೊತ್ತಲ್ಲ .. ಅವನಿಗೆ ಹುಟ್ಟು ಹಬ್ಬಕ್ಕೆ ಒಂದು ಸುಬಾಸಯ ಹೇಳೋಣ  ಅನ್ಕಂಡಿದ್ವಿ.. "
 
"ಹಾ … ಮುಂದಾ!"
 
"ಆವಾಗ ನಾವೆಲ್ಲಾ ಓದುತಿದ್ದಾ ಕಾಲ.. ಜೇಬು ತೂತು.. ಪ್ರತಿ ಕರ್ಚಿಗೂ ಮನೆಯಲ್ಲಿ ಕೇಳಬೇಕಾದ ಕಾಲ.. ಏನೋ ಹುಚ್ಚು ಮನ್ಸು.. ವೆಂಕಿಗೆ ಶುಭಾಷಯ ಹೇಳೋಕೆ ತಂತಿ ಕಳಿಸೇ ಬಿಡೋಣ ಅಂತ ಅಂಚೆ ಕಚೇರಿಗೆ ಹೋದ್ವಿ… "
 
"ಹಾ ಆಮ್ಯಾಕೆ"
 
"ಅಲ್ಲಿದ್ದ ಒಂದು ವಮ್ಮನ ಕೇಳಿದ್ವಿ.. ಆಕೆ ಒಂದು ಪಾರಂ ಕೊಟ್ಳು.. ತುಂಬಿ ಕೊಡಿ ಅಂಥಾ"
 
"ಹಾ"
 
"ನಾವು ಮಹಾಭಾರತ ಬರೆದಂಗೆ ನಮ್ಮ ತಲೇಲಿದ್ದದನೆಲ್ಲ ಆ ಪಾರಂನಲ್ಲಿ  ತುಂಬಿ.. ನಮ್ಮ ಸುಬಾಸಯ ಸಂದೇಸ ಬರ್ದು ಕೊಟ್ವಿ… ಎಟಾಯ್ತದೆ ನೋಡವ್ವಾ ಅಂತ ಕೇಳಿದ್ವು … ಆ ವಮ್ಮ ಅದನ್ನ ದಿನಪತ್ರಿಕೆ ಓದ್ದಂಗೆ ಓದ್ತಾ.. ಇದಕ್ಕೆ ೯೫ ರುಪಾಯ್ ಆಯ್ತದೆ ಅಂದ್ಲು… ನಾವೆಲ್ಲಾ ಚಡ್ಡಿ ಜೇಬಿಂದ ಹಿಡಿದು.. ನಮ್ಮ ಚೀಲ ಎಲ್ಲ ತಡಕಾಡಿದಾಗ ಸಿಕ್ಕದ್ದು ೮೦ ರುಪ್ಪಾಯಿ… 
 
"ಆಮ್ಯಾಕೆ… "
 
"ಮ್ಯಾಡಂ… ನಮ್ತಾವ ಬರಿ ೮೦ ರುಪಾಯಿ ಮಾತ್ರವ ಇರೋದು.. ಏನ್ ಮಾಡೋದು ಅಂದದಕ್ಕೆ ಆ ವಮ್ಮ .. ನಿಮ್ಮ ಸುಬಾಸಯ ಸಂದೇಸ ವಸಿ ತುಂಡು ಮಾಡಿ.. ಪ್ರತಿ ಪದಕ್ಕೆ ಇಷ್ಟು ದುಡ್ದಾಯ್ತದೆ ಅಂತು.. "
 
"ಹೂಂ…"
 
"ಸರಿ ಇನ್ನೇನ್ ಮಾಡೋದು.. ಹಂಗೆ ಮಾಡಿ ನಾವು ಹೇಳಬೇಕಾದ್ದು ಬರಿ ಸುಬಾಸಯ ತಾನೇ.. ಹುಟ್ಟು ಹಬ್ಬಕ್ಕೆ ಸುಬಾಸಯ ಅಂತ ಅದನ್ನ ತಿದ್ದಿ.. ಕೊಟ್ವಿ.. ನಮ್ಮತ್ರ ಇದ್ದಾ ದುಡ್ಡು ಸರಿ ಹೋಯ್ತು.. "
 
"ಮುಂದಿದ್ದು ನಂಗೊತ್ತು" ಅಂದ ಇನ್ನೊಬ್ಬ ಸೇದುತಿದ್ದ ಬೀಡಿಯ ಕೊನೆ ದಂ ಎಳೆದು!
 
"ಹೊಟ್ಟೆ ಹಸಿತಾ ಇತ್ತು.. ಇದ್ದ ಬದ್ದ ದುಡ್ಡೆಲ್ಲ ತಂತಿಗೆ ಸುರಿದು.. ತಂತಿ ಕಳಿಸಿ ಖಾಲಿ ಹೊಟ್ಟೆ ಹಿಡಿದುಕೊಂಡು ಮನೆಗೆ ಹೋದ್ವಿ.. "
 
"ಮನೆಗೆ ಹೋದ್ರೆ.. ಈ ಬಡ್ಡಿ ಹೈದ ವೆಂಕಿ ಮನೆ ತಾವ ಕಾಯ್ತಾ ಅವ್ನೆ!" 
 
"ನಮಗೆಲ್ಲ ಒಂದು ಕಡೆ ಕುಸಿ.. ಇನ್ನೊಂದು ಕಡೆ ಅನ್ಯಾಯವಾಗಿ ತಂತಿ ಕಳ್ಸಿ ಇದ್ದ ಬದ್ದ ದುಡ್ಡೆಲ್ಲ ಖಾಲಿ ಮಾಡಿಕೊಂಡು ಬಂದ್ರೆ … ಈ ಮಗ ಬೆಂಗಳೂರಿಗೆ ಬಂದವ್ನೆ ಅಂತ ಕೋಪ"
 
"ಏನೋ ಮಾಡೋದು.. ಆ ವಸಿ ಕೋಪ…  ವಸಿ ಕುಸಿಯಲ್ಲಿ ಮಾತಾಡ್ತಾ ಕುಂತ್ವಿ.. ಮತ್ತೆ ಕುಸಿ ಕುಸಿಯಾಗಿ ಮತ್ತೊಮ್ಮೆ ಸುಬಾಸಯ ಕೋರುತ್ತಾ.. ಮನೆಯಲ್ಲಿ ಅಮ್ಮ ಮಾಡಿದ್ದ ಪೊಗದಸ್ತಾದ ಅಡಿಗೆಯನ್ನ ಚಪ್ಪರಿಸಿಕೊಂದು ತಿಂದ್ವಿ"
 
"ಏನೇ ಆಗಲಿ.. ನಮ್ಮ ಗೆಳೆತನದ ಬೆಳ್ಳಿ ಹಬ್ಬದ ಸಂಭ್ರಮದಲ್ಲಿ ನಾವು ಮೊದಲು ಹಾಗು ಕಡೆ ಬಾರಿ ಕಳಿಸಿದ ತಂತಿ ಅವಾಂತರವನ್ನು ಇವತ್ತು ನೆಪ್ಪು ಮಾಡ್ಕಂಡು ನಗ್ತಾ ಇರ್ತೀವಿ.. ಅಂತ ತಂತಿ ಸೇವೆ ಇನ್ನೊಂದು ಹದಿನೈದು ಇಪ್ಪತ್ತು ದಿನದಲ್ಲಿ ನಿಂತು ಹೋಗುತ್ತೆ ಅಂದ್ರೆ ಬೇಸರವಾಯ್ತದೆ.. ಆಗಲಿ ಜಗತ್ತಲ್ಲಿ ಯಾವ್ದು ತಾನೇ ಸಾಸ್ವಾತ ಅಲ್ವ"
 
ಅರೆ ಅಣ್ಣಾ ನಿನಗೆ ಗೊತ್ತಾ.. ನಮ್ಮ ಗೆಳೆತನ ಬೆಳೆದು ನಿಂತು ಇಪ್ಪತೈದು ವರ್ಸ ಆಯಿತು ಹಾಗೆಯೇ ನಮ್ಮ ನಟರಾಜಣ್ಣ ಮತ್ತು ತಂಡದ "ಪಂಜು" ಇ-ಪತ್ರಿಕೆ ಕೂಡ ಸುರುವಾಗಿ ಇಪ್ಪತ್ತೈದು ವಾರಗಳು ಆಯಿತು… ಎಂತಹ ಸಂತಸ ಸಮಾಚಾರ ಅಲ್ವ…"
 
"ಬನ್ರಣ್ಣ ನಾವೆಲ್ಲಾ ಸೇರಿ ಕನ್ನಡ ತಾಯಿಯ ಸೇವೆ ಮಾಡುತ್ತಾ ಕನ್ನಡದ ಕಂಪನ್ನು ಜಗತ್ತಿನೆಲ್ಲೆಡೆ ಬೆಳಗುಸುತ್ತಿರುವ "ಪಂಜು" ತಂಡಕ್ಕೆ ಸುಬಾಸಯ ಕೋರುತ್ತ ಅವರಿಗೆ ಅಭಿನಂದನೆಗಳನ್ನು ಸಲ್ಲಿಸೋಣ"
 
"ಪ್ರೀತಿಯ ನಟಣ್ಣ.. ನಿಮ್ಮ ಅಭಿಮಾನದ ಪಂಜು ಸದಾ ಬೆಳಗುತ್ತಲಿರಲಿ ಹಾಗೆಯೇ ಇದರ ಪ್ರಕಾಸದಲ್ಲಿ ಅನೇಕ ಲೇಖಕರು, ಕವಿಗಳು ಬೆಳಗಲಿ ಕೀರ್ತಿಸಾಲಿಗಳಾಗಲಿ.. ಮತ್ತೊಮ್ಮೆ ಇಪ್ಪತ್ತೈದು ವಾರಗಳ ಸವಿ ನೆನಪಲ್ಲಿ ಪಂಜು ತಂಡಕ್ಕೆ ಅಭಿನಂದನೆಗಳು"
 
 
ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

4 Comments
Oldest
Newest Most Voted
Inline Feedbacks
View all comments
Utham
10 years ago

Danyavadagallu
Shubhavagali

Ganesh
10 years ago

ಹಾ ಹಾ ಚೆನ್ನಾಗಿದೆ ನಿಮ್ಮ ತಂತಿ ಸೇವೆ ಕಥೆ. ಕೆಲ ನೆನಪುಗಳು ಹೀಗೆ ಜೀವನವೀಡಿ ನಮ್ಮನ್ನ ಕಾಡುತ್ತ ಮನಕ್ಕೆ ಮುದವನ್ನ ನೀಡುತ್ತವೆ ಅಲ್ಲವೇ ಶ್ರೀಕಾಂತಣ್ಣ..? ಏನು ಮಾಡೋಕೆ ಬರುತ್ತೆ ಹೇಳಿ ಕಾಲ ಬದಲಾದ ಹಾಗೆ ನಾವೂ ಬದಲಾಗಬೇಕು.
ಶುಭವಾಗಲಿ.

GAVISWAMY
10 years ago

telegram is dead..start immediately..!
ಹೌದು.. ಟೆಲಿಗ್ರಾಮ್ ಇನ್ನಿಲ್ಲವೆಂಬುದೇ ಬೇಸರದ ವಿಷಯವಾದರೂ
ಕಾಲದ ಓಟಕ್ಕೆ ತಕ್ಕಂತೆ ಆಗಿರುವ ಬದಲಾವಣೆಯನ್ನು ನೋಡಿದಾಗ ಟೆಲಿಗ್ರಾಮಿನ ಸಾವು 
ಸಹಜ ಅನ್ಸುತ್ತೆ ..
ಲೇಖನ ಚೆನ್ನಾಗಿದೆ …ಅಭಿನಂದನೆಗಳು.

 

prashasti.p
10 years ago

ಚೆನ್ನಾಗಿದೆ ಶ್ರೀಕಾಂತಣ್ಣ ..

4
0
Would love your thoughts, please comment.x
()
x