ಬೆಂಕಿಗೆ ಕೈ ಹಾಕಬಾರದು ಸುಡುತ್ತದೆ ಅಂತ ನಾವಂದರೆ…: ಡಾ. ಗವಿ ಸ್ವಾಮಿ

 

ಹಿರಿಯ ಮಿತ್ರರಾದ ಡಾಕ್ಟರ್ .ನಟರಾಜು SM ರವರ ಪುಸ್ತಕ ‘ವಂಡರ್ ಲ್ಯಾಂಡಿನ ಪುಟ್ಟ ರಾಜಕುಮಾರನೂ ಮತ್ತು ಖುಷಿ ನಗರಿಯ ಅವನ ನಲ್ಮೆಯ ಗೆಳತಿಯೂ ‘ ವನ್ನು ಓದಿ ಮುಗಿಸಿದೆ.

ಆಶ್ಚರ್ಯವಾಯಿತು ಎಂದರೆ ಸುಳ್ಳಾಗುತ್ತದೆ. ಏಕೆಂದರೆ ಅವರ ಪ್ರತಿಭೆಯ ಝಲಕನ್ನು ಕಾಲೇಜಿನಲ್ಲೇ ನೋಡಿದ್ದೆ. ಕಥೆ, ಕಾದಂಬರಿ, ಆತ್ಮಕಥೆ, ಕವಿತೆ ಇವ್ಯಾವುದರಚೌಕಟ್ಟಿಗೂ ನಿಲುಕದ ಒಂದು ಹೊಸ ಪ್ರಯೋಗ. ಗೆಳೆಯ -ಗೆಳತಿಯ ಪಾತ್ರಗಳು ಕಾಡುತ್ತವೆ. ಮಾದರಿ ಸ್ನೇಹವೆಂದರೆ ಇದೇ ಇರಬಹುದಾ ಅನಿಸುತ್ತದೆ. ಗೆಳತಿ ವಯಸ್ಸಿಗೂ ಮೀರಿದ ಜೀವನಾನುಭವನ್ನುಳ್ಳವಳು. ಗಟ್ಟಿಗಿತ್ತಿ. ಆಕೆಯ ಮನಸ್ಸಿನಲ್ಲಿ ಗೊಂದಲಕ್ಕೆ , ದ್ವಂದ್ವಕ್ಕೆ ಜಾಗವೇ ಇಲ್ಲ . ಪ್ರೀತಿ ಮತ್ತು ಸ್ನೇಹದ ನಡುವೆ ಇರುವ ಅಗೋಚರ ರೇಖೆ ಆಕೆಗೆ ಅಂಗೈ ಮೇಲಿನ ಗೆರೆಯಷ್ಟೇ ಪರಿಚಿತ.

ಒಮ್ಮೆ ಮಮತಾಮಯಿ ತಾಯಿಯಂತೆ, ಮತ್ತೊಮ್ಮೆ ಅಕ್ಕರೆಯ ಅಕ್ಕನಂತೆ ಮಗದೊಮ್ಮೆ ಕಷ್ಟದಲ್ಲಿ ಅಣ್ಣನನ್ನು ಆಶ್ರಯಿಸುವ ಪುಟ್ಟ ತಂಗಿಯಂತೆ ಕಾಣುತ್ತಾಳೆ . ಗೆಳೆಯನ ಏಳಿಗೆಯ ಬಗ್ಗೆ ಆಕೆಗೆ ಇರುವ ಕಾಳಜಿ , ಆತನ ಮಾನಸಿಕ ಹರವನ್ನು ಆಕೆ ವಿಸ್ತರಗೊಳಿಸುತ್ತಾ ಹೋಗುವ ರೀತಿ , ಸಮಾಜದೆಡೆಗೆ ಆಕೆಗೆ ಇರುವ ತುಡಿತ- ಬೆರಗು ಮೂಡಿಸುತ್ತದೆ, ಗೌರವವನ್ನೂ ಸಹಾ ‘. ಒಟ್ಟಿನಲ್ಲಿ ಆಕೆಯೊಂದು ‘ಬೆಂಕಿಯಲ್ಲಿ ಅರಳಿದ ಹೂವು.

ಗೆಳೆಯನ ವಿಷಯಕ್ಕೆ ಬಂದರೆ, ತುಂಬಾ ಭಾವಜೀವಿ. ಜೀವನ ಅವನನ್ನೂ ಬಿಟ್ಟಿಲ್ಲ. ಕುಲುಮೆಗೆ ಹಾಕಿ ಒಂದು ಸುತ್ತು ಹದವಾಗಿ ಬಡಿದಿದೆ .

ಸ್ನೇಹಕ್ಕೆ ಒಂದು HIGH STANDARD ಅಥವಾ ಮೇಲುಪಂಕ್ತಿ ಹಾಕಿರುವ ಗೆಳತಿಯಿಂದ ಗೌರವವನ್ನ್ನು ಪಡೆಯುವುದು ಮತ್ತು ಆ ಸ್ನೇಹಕ್ಕೆ ಚ್ಯುತಿ ಬಾರದಂತೆ ನಿಭಾಯಿಸುವುದು ಬಹಳ ಕಷ್ಟ . ಅದರಲ್ಲಿ ಆತ ಬಹುಪಾಲು ಯಶಸ್ವಿಯಾಗುತ್ತಾನೆ. ಆತನ ತುಮುಲಗಳನ್ನು ಆಕೆ ಊಹಿಸುವ ರೀತಿ , ಆತನನ್ನು ಮನ್ನಿಸುವ ಅವಳ ಮನೋವೈಶಾಲ್ಯ ನಿಜಕ್ಕೂ ಅಧ್ಬುತ. ಕೊನೆ ಕೊನೆಗೆ ಸ್ನೇಹ ಆತನಿಗೆ ಹಗ್ಗದ ಮೇಲಿನ ನಡಿಗೆಯಾಯಿತಾ?

ಆತನ ಮನಸ್ಸು ಪ್ರೀತಿಯೆಡೆಗೆ ಸೆಳೆಯಿತಾ? ಹಾಗಂತ ನನ್ನ ಅಭಿಪ್ರಾಯ. I MIGHT BE WRONG. ಆದರೂ ಆತನಿಗೆ benefit of doubt ಕೊಡುತ್ತೇನೆ. ಏಕೆಂದರೆ ಆತ ಮುಗ್ಧ.

ಆಗಸದಲ್ಲಿ ಮೋಡಗಳು ನಿಧನಿಧಾನವಾಗಿ ದಟ್ಟವಾಗುವ ಹಾಗೆ, ಕೃತಿಯು ಓದುತ್ತಾ ಹೋದಂತೆ ತೀವ್ರವಾಗುತ್ತಾ ಹೋಗುತ್ತದೆ.

ಇದು ನನ್ನ ಅಭಿಪ್ರಾಯ. ತಪ್ಪಿದ್ದರೂ ಇರಬಹುದು. ಮತ್ತೊಮ್ಮೆ ಓದಿದರೆ ಹೊಸ ಅರ್ಥ ಹೊಳೆಯಬಹುದು. ಒಟ್ಟಾರೆ ನನಗೆ ಇಷ್ಟವಾಯಿತು.

ಆತನ ಮಾನಸಿಕ ಹರವನ್ನು ಆಕೆ ವಿಸ್ತಾ ರ ಗೊಳಿಸುತ್ತಾ ಹೋಗುವ ರೀತಿ —

ಎಂಬ ವಾಕ್ಯ ಸ್ವಲ್ಪ ಗೊಂದಲಮಯವಾಗಿ ಕಂಡರೆ ಹೀಗೆ ಓದಿಕೊಳ್ಳಿ–ಆತನನ್ನು ಆಕೆ ಮಾನಸಿಕವಾಗಿ ಹರವುಗೊಳಿಸುತ್ತಾ ಹೋಗುವ ರೀತಿ — .

patches of brilliance ಎನ್ನುವ ಹಾಗೆ ಇಲ್ಲಿ ಹಲವು brilliant patch ಗಳಿವೆ.ಕೃತಿಕಾರ ಮಿಂಚುತ್ತಾನೆ . ಇಂತಹ ಒಂದು ಪ್ಯಾರಾ ಯಥಾವತ್ತಾಗಿ;

”ನಾನು ಆ ಟ್ರಾಮ್ ಹೋಗುತ್ತಿದ್ದ ರಸ್ತೆ ಬದಿಯಲ್ಲಿ ನಡೆದು ಸಾಗುತ್ತಿದ್ದೆ. ಆ ರಸ್ತೆಯಲ್ಲಿ ಸಾಗುತ್ತಿರುವಾಗ ಒಬ್ಬ ಮಧ್ಯ ವಯಸ್ಸಿನ ಹೆಂಗಸು ನನ್ನತ್ತ ನಗು ಬೀರಿದ ಅರ್ಥ ನನಗೆ ತಿಳಿದಿರಲಿಲ್ಲ. ಆ ನಗು ನನಗೆ ಒಗಟಾಗಿ ಕಂಡಿತ್ತು . ಆ ನಗುವಿನ ಅರ್ಥ ಕುರಿತು ಯೋಚಿಸುತ್ತಾ ಆ ಮುಖ್ಯ ರಸ್ತೆಯಿಂದ ಸಣ್ಣ ಗಲ್ಲಿಯೊಂದಕ್ಕೆ ನುಗ್ಗಿದ್ದೆ . ಆ ಗಲ್ಲಿಯಲ್ಲಿ ಒಂದಷ್ಟು ದೂರ ಸಾಗಿದಾಗ ವೃತ್ತಾಕಾರದಲ್ಲಿ ಯಾವುದೋ ಹಿಂದಿ ಹಾಡಿನ ತಾಳಕ್ಕೆ ಹೆಜ್ಜೆ ಹಾಕುತ್ತಿತ್ತು . ಜೊತೆಗೆ ಕೆಲವರು ಎತ್ತರದ ಧ್ವನಿ ಯಲ್ಲಿ ಹಾಡುತ್ತಿದ್ದರು ಸಹಾ .ಅವರ ಸುತ್ತಮುತ್ತ ನಿಂತಿದ್ದ ಜನರ ಕಂಡು ನಾನು ಇರುವ ಸ್ಥಳ ಯಾವುದೆಂದು ಅರಿವಿಗೆ ಬಂತು .ನಾನು ನಿಲ್ಲಬಾರದ ಜಾಗದಲ್ಲಿ ನಿಂತಿದ್ದೇನೆ ಅನಿಸಿದರೂ ನೋಡೋಣ ಆ ರಸ್ತೆಯಲ್ಲಿ ಇನ್ನೇನಿದೆ ಎಂದು ಮುಂದೆ ಹೆಜ್ಜೆ ಇಟ್ಟಿದ್ದೆ .ವಯಸ್ಸಿಗೆ ಬಾರದ ಹುಡುಗಿಯರಿಂದ ಹಿಡಿದು ವಯಸ್ಸಾದ ಮುದುಕಿಯರವರೆಗೆ ರಸ್ತೆಯಲ್ಲಿ ಸಾಲಾಗಿ ನಿಂತು ತಮ್ಮ ಹಾವಭಾವ , ತೊಡುಗೆ ಮತ್ತು ನೋಟಗಳಿಂದ ಜನರನ್ನು ಅವರು ತಮ್ಮೆಡೆಗೆ ಸೆಳೆಯುತ್ತಿರುವ ಬಗೆಯನ್ನು ಕಂಡಿದ್ದೆ .ನನಗದು ಹೊಸ ಅನುಭವವಾಗಿತ್ತು .ಒಂದು ಹೆಣ್ಣಿನ ಕಣ್ಣುಗಳಂತೂ ನನ್ನನ್ನೇ ಹಿಂಬಾಲಿಸುತ್ತಿರುವ ಹಾಗೆ ಭಾಸವಾಗುತ್ತಿತ್ತು .ಆ ಹುಡುಗಿಯೊಡನೆ ಮಾತನಾಡೋಣ ಅಂತ ನನ್ನ ಮನಸ್ಸು ಒತ್ತಿ ಹೇಳುತ್ತಿತ್ತು .ಆದರೆ ನನ್ನ ಒಳ ಮನಸ್ಸು ನನ್ನನ್ನು ಅವಳೊಡನೆ ಮಾತನಾಡದ ಹಾಗೆ ತಡೆಹಿಡಿದಿತ್ತು .ನಾನು ನನ್ನ ಹಾಸ್ಟೆಲ್ ದಿಕ್ಕಿನೆಡೆಗೆ ನಡೆಯಲು ಶುರು ಮಾಡಿದ್ದೆ ” .

ಇಲ್ಲಿ ಬರುವ ‘ಗೆಳೆಯ’ ಬಗ್ಗೆ ಹೇಳಬೇಕೆಂದರೆ :

ಬೆಂಕಿಗೆ ಕೈ ಹಾಕಬಾರದು ಸುಡುತ್ತದೆ ಅಂತ ನಾವಂದರೆ, ಅದು ಕೇವಲ ಸುಡುತ್ತದಾ ಅಥವಾ ಮತ್ತೂ ಏನಾದರೂ ಅನುಭವ ನೀಡುತ್ತದಾ ನೋಡುವ ಎಂದು ಕೈಹಾಕಿಯೇ ತೀರುವವ. ಹೊಸ ಹೊಸ ಅನುಭವಗಳಿಗೆ ಒಡ್ಡಿಕೊಳ್ಳುವ ಹಂಬಲ ಅವನಿಗೆ. ಅದರ ಪರಿಣಾಮ ಅಥವಾ cost ಏನಾದರೂ ಪರವಾಗಿಲ್ಲ.

ಒಂದು ಪ್ರಸಂಗ ಬರುತ್ತದೆ :

ಹುಡುಗ -ತನ್ನ ಗೆಳತಿಯನ್ನು impress ಮಾಡುವ ಯಾವುದೇ ಉದ್ದೇಶವಿಲ್ಲದೇ, ಸಹಜ ಮುಗ್ಧತೆಯಿಂತ – ಪ್ರಣಯ,ಲೈಂಗಿಕತೆ,ಸಂಸಾರ ಇತ್ಯಾದಿಯ ಬಗ್ಗೆ ಮಾತನಾಡುತ್ತಾನೆ . ಇದು ಆಕೆಯನ್ನು ಕೆರಳಿಸುತ್ತದೆ .ಹಾಗಂತ ಅವನನ್ನು ಅನುಮಾನಿಸುವುದಿಲ್ಲ .ಅದು ಅವಳ ದೊಡ್ಡ ಗುಣ .

ತನ್ನ ಗೆಳತಿಯ ಕಣ್ಣುಗಳಲ್ಲಿ ತಾನು ಸಣ್ಣವನಾಗಿಬಿಟ್ಟೆನಾ ಎಂದು ಪರಿತಪಿಸುತ್ತಾನೆ ಹುಡುಗ. ಆ ಬೇಗುದಿಯಿಂದ ಹೊರಬರಲೆಂಬಂತೆ, ”ನನ್ನ ಲೈಂಗಿಕ ಶಕ್ತಿಯನ್ನು ಮತ್ತೊಂದು ಸದ್ಗುಣವನ್ನಾಗಿ ಬದಲಿಸಲು ನನಗೆ ಸಹಕರಿಸುವೆಯಾ?” ಎಂದು ಗೆಳತಿಯನ್ನು ಬೇಡಿಕೊಳ್ಳುತ್ತಾನೆ. ಅವನ ಮುಗ್ಧತೆ ಯನ್ನು ನೋಡಿ ಅನುಕಂಪವುಂಟಾಗುತ್ತದೆ. ಇಲ್ಲಿ ಕೃತಿಕಾರ ಮತ್ತೊಮ್ಮೆ ತನ್ನ ಇರವನ್ನು ತೋರಿಸುತ್ತಾನೆ.

 

ಡಾ . SM ನಟರಾಜುರವರಿಗೆ ಅಭಿನಂದನೆಗಳು ಮತ್ತು ಶುಭಹಾರೈಕೆಗಳು .

ನಿಮ್ಮ ಬರವಣಿಗೆ ನಿರಂತರವಾಗಿ ಮುಂದುವರಿಯಲಿ.

-ಡಾ. ಗವಿ ಸ್ವಾಮಿ

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

3 Comments
Oldest
Newest Most Voted
Inline Feedbacks
View all comments
Ganesh
11 years ago

ವಿಮರ್ಶೆ ಚೆನ್ನಾಗಿದೆ. ಕೃತಿಯನ್ನು ಓದಲು ಹುರಿದುಂಬಿಸಿದೆ ನಿಮ್ಮ ಬರಹ.
ಶುಭವಾಗಲಿ ಎಲ್ಲರಿಗೂ.

hipparagi Siddaram
hipparagi Siddaram
11 years ago

ವಂಡರ್ ಲ್ಯಾಂಡಿನ……..ಕೃತಿಯನ್ನು ವಿಮರ್ಶಿಸಿದ ಸಹೃದಯರಾದ ಡಾ.ಗವಿಸ್ವಾಮಿಯವರಿಗೆ ಧನ್ಯವಾದಗಳು. ಕೃತಿಯೊಂದನ್ನು ವಿಮರ್ಶೆಯ ಮೂಲಕ ಪರಿಚಯಿಸುವುದರಿಂದಲೇ ಕೃತಿಯ ಎಲ್ಲಾ ಮಗ್ಗಲುಗಳನ್ನು ಅರಿತುಕೊಳ್ಳಲು ಸಾಧ್ಯ ಮತ್ತು ಅದು ಕೃತಿಯ ಸಾರ್ಥಕತೆಯೂ ಹೌದು ! ವಸ್ತುನಿಷ್ಟವಾಗಿ ಮಾಡುವ ವಿಮರ್ಶೆಯು ಕೃತಿಕಾರರಿಂದಿಗೆ ಓದುಗರಿಗೂ ಸಹ ವಿಭಿನ್ನ ದೃಷ್ಟಿಕೋನದಲ್ಲಿ ಚಿಂತನೆಗೆ ಹಚ್ಚುವಂತಹ ಕೆಲಸವನ್ನು ಮಾಡಿಸುವ ಜವಾಬ್ದಾರಿಯು ವಿಮರ್ಶಕರಿಗೆ ಇರುವುದು ಸಹಜ, ಇಲ್ಲಿ ವಿಮರ್ಶಕರು ಯಾವುದೇ …ismಗಳ ಹಂಗಿಲ್ಲದೇ ವಿಮರ್ಶೆ ಮಾಡಿದ್ದು, ನನಗೂ ಸಹ ಕೆಲವೊಂದು ಹೊಸ ವಿಚಾರಗಳು ಮೂಡಿಬಂದಂತಾಗಿ ಮತ್ತೊಮ್ಮೆ ಕೃತಿಯ ಓದಿಗೆ ಉತ್ಸಾಹ ಮೂಡಿಸಿತು. ಶುಭದಿನ….

sharada moleyar
sharada moleyar
11 years ago

ಶುಭವಾಗಲಿ 

3
0
Would love your thoughts, please comment.x
()
x