ಭೂಸ್ವಾದೀನ ಕಾಯ್ದೆ: ಎನ್. ಗುರುರಾಜ್ ತೂಲಹಳ್ಳಿ

         
ನಮ್ಮ ಭಾರತ ದೇಶ ಕೃಷಿ ಪ್ರಧಾನ ದೇಶವಾಗಿದ್ದು ಶೇಕಡ 70 ರಷ್ಠು ಜನತೆ ಕೃಷಿಯನ್ನೆ ಅವಲಂಬಿಸಿ ಬದುಕುತ್ತಿದ್ದಾರೆ ಎಂದು ನಮ್ಮ ಸರಕಾರಗಳು ಮತ್ತು ರಾಜಕೀಯ ಪಕ್ಷಗಳು ರೂಪಿಸುವ ಎಲ್ಲಾ ನೀತಿ ಯೋಜನೆಗಳ ಹಿಂದೆಯು ರೈತರ ಮತ್ತು ದಲಿತರ ಏಳಿಗೆಯ ಘನ ಉದ್ದೇಶವಿದೆ ಎಂದು ಮಾತ್ರ ಹೇಳಿಕೊಳ್ಳುತ್ತವೆ ಹೊರತು ಅಂತಹ ಯಾವ ಕಾರ್ಯಗಳನ್ನು ಮಾಡುವುದಿಲ್ಲ. ಇದಕ್ಕೆ ಪೂರಕವಾಗಿ ನಮ್ಮ ರಾಜಕೀಯ ಪಕ್ಷಗಳು ತಮ್ಮ ಎಲ್ಲಾ ಸಭೆ-ಸಮಾರಂಭಗಳಲ್ಲಿ ರೈತರ ಪರ, ಬಡವರ ಪರ,  ರಾಜಕೀಯ ನೀತಿಗಳನ್ನು ರೂಪಿಸುತ್ತೇವೆ, ಬಡವರ ಅಭಿವೃದ್ದಿಯೇ ನಮ್ಮ ಉದ್ದೇಶ ಎಂದು ಬಹಿರಂಗವಾಗಿ ಬಡಾಯಿ ಕೊಚ್ಚಿಕೊಳ್ಳುತ್ತವೆ. ಆದರೆ ಬಡವರ, ದಲಿತರ, ರೈತರ ಮತ್ತು ಮಹಿಳೆಯರ ಪರವಾಗಿದ್ದೇವೆ ಎಂದು ನೆಪಮಾಡಿಕೊಂಡು ಬಂಡವಾಳಶಾಹಿಗಳ, ಶ್ರೀಮಂತ ವರ್ಗಗಳಿಗೆ ಅನುಕೂಲವಾಗುವಂತೆ ಪೂರ್ವಯೋಜನೆಯಾಗಿ ತಮ್ಮ ಎಲ್ಲಾ ರಾಜಕೀಯ ನೀತಿಗಳನ್ನು ಜಾರಿಗೊಳಿಸುತ್ತಿವೆ. ಕೃಷಿಯನ್ನೆ ಅವಲಂಭಿಸಿ ಬದುಕುವ ಬಡ ಕುಟುಂಬಗಳನ್ನು ಭೂ ಸ್ವಾದೀನ ಕಾಯ್ದಮೂಲಕ  ಒಕ್ಕಲೆಬ್ಬಿಸುವುದೇ ಇವತ್ತಿನ ಕೇಂದ್ರಸರಕಾರದ ಧೋರಣೆಯಾಗಿದೆ.

ಬ್ರಿಟೀಷರ ಕಾಲದ 1894ರ ಕರಾಳ ಭೂಸ್ವಾದೀನ ಕಾಯ್ದೆಯನ್ನು ಕೇಂದ್ರ ಸರಕಾರಗಳು 2011ರವರೆಗೂ ಪಾಲಸಿಕೊಂಡು ಬರಲಾಗಿತ್ತು.  ಈ ಕಾಯ್ದೆ ಹೋಗಲಾಡಿಸಬೇಕು ಎನ್ನುವುದು ಒಕ್ಕರಲಿನ ಬೇಡಿಕೆಯಾಗಿದ್ದಿತು. ಎಲ್ಲಾ ಪಕ್ಷಗಳ ಒಪ್ಪಿಗೆಯ ಮೇರಿಗೆ ಈ ಕಾಯ್ದೆಯಲ್ಲಿನ ಲೋಪಗಳನ್ನು ಸರಿಪಡಿಸುವ ಸಲುವಾಗಿ ಸಾರ್ವಜನಿಕರು, ಬುದ್ದಿಜೀವಿಗಳು ಜನಪರ ಕಾಳಜಿ ಉಳ್ಳವರು ನಡೆಸಿದ ತೀವ್ರ ಹೋರಾಟದ ಫಲವಾಗಿ ಮತ್ತು ಹೈಕೋರ್ಟಿನ ತೀರ್ಪುಗಳ ಹಿನ್ನಲೆಯಲ್ಲಿ ಭೂ ಸ್ವಾದೀನ ಮತ್ತು ಪರಿಹಾರ ತಿದ್ದುಪಡಿ ಮಸೂದೆ 2011ರಲ್ಲಿ ಪ್ರಾರಂಭವಾಗಿ 2013 ರಲ್ಲಿ ಜಾರಿಯಾಯಿತು. ಈ ಕಾಯ್ದೆಯ ಪ್ರಕಾರ ಕೃಷಿಗೆ ಯೋಗ್ಯವಾಗಿರುವ ಭೂಮಿಯನ್ನು ವಶಪಡಿಸಿಕೊಳ್ಳುವಂತಿಲ್ಲ. ಭೂ ಸ್ವಾದೀನ ಪಡಿಸಿಕೊಂಡು 5 ವರ್ಷದೊಳಗೆ ಕಾರ್ಖಾನೆಗಳನ್ನು ಸ್ಥಾಪಿಸಬೇಕು. ಇಲ್ಲವಾದಲ್ಲಿ ಕಂಪನಿಗಳಿಗೆ ನೀಡಿದ್ದ ಭೂಮಿಯನ್ನು ಮರು ಹಿಂಪಡೆದು ಭೂಮಿಯನ್ನ ಸಂತ್ರಸ್ಥ ರೈತ ಕುಟುಂಬಗಳಿಗೆ ನೀಡುವ ಕಂಪನಿಗಳಿಂದ ರೈತರ ಉದ್ಯೋಗ ನಷ್ಟ ಪರಿಹಾರವಾಗಿ ಮಾಸಿಕ ವೇತನ ಕನಿಷ್ಠ ಹತ್ತು ಸಾವಿರ ರೂ ಗಳನ್ನ, ಕೂಲಿ ಕಾರ್ಮಿಕರಿಗೆ, ಕಸುಬುದಾರರ ಕುಟುಂಬಗಳಿಗೆ ಮಾಸಿಕವಾಗಿ ತಲಾ ಎರಡು ಸಾವಿರ ರೂಗಳನ್ನ ನೀಡಬೇಕು. ರೈತರಿಂದ ಬಲವಂತವಾಗಿ ಭೂಮಿಯನ್ನು ಕಿತ್ತು ಕೊಳ್ಳುವಂತಿಲ್ಲ ಎಂಬುದು ಈ ಖಾಯ್ದೆಯಲ್ಲಿ ನಮೂದಿಸಲಾಗಿದೆ.

ಪ್ರಸ್ತುತ ಕೇಂದ್ರದಲ್ಲಿರುವ ಎನ್‍ಡಿಎ ಸರಕಾರ 2013ರ ಭೂಸ್ವಾದಿನ ಕಾಯ್ದೆಗೆ ತಿದ್ದು ಪಡಿಯನ್ನು ತರುವ ಸಲುವಾಗಿ ಸತತ 3 ಬಾರಿ ಸುಗ್ರಿವಾಜ್ಞೆಯನ್ನು ಹೊರಡಿಸಿತ್ತು. ಈ ಮೂಲಕ ರೈತರ ಜಮೀನುಗಳನ್ನು ಅವರ ಒಪ್ಪಿಗೆ ಇಲ್ಲದಿದ್ದರೂ ಬಲವಂತವಾಗಿ ಕಂಪನಿಗಳು ನೀಡುವ ಕನಿಷ್ಠ ಧರಕ್ಕೆ ಜಮೀನನ್ನು ಸ್ವಾದೀನ ಪಡಿಸಿಕೊಳ್ಳುವುದು ಹಾಗೂ ಕಂಪನಿಗಳು ಯಾವುದೇ ಕಾಲಮಿತಿಯಿಲ್ಲದೆ ಯಾವಾಗ ಬೇಕಾದರು ಕೈಗಾರಿಕೆ ನಿರ್ಮಿಸಲು ಅವಕಾಶ ಮಾಡಿತ್ತು. ಆದರೆ ಇದರ ವಿರುದ್ದ ದೇಶಾದ್ಯಂತ ಭೂಮಿಯ ಹಕ್ಕನ್ನು ಕಾಯಲು ನಡೆದ ಪ್ರಬಲ ವಿರೋಧ ವ್ಯಕ್ತಪಡಿಸಿದ ಜನತೆಯು ಈ ತಿದ್ದುಪಡಿಯ ವಿರುದ್ಧು ದಂಗಯೆದ್ದಿತು. ಮೇಲ್ಮನೆಯ ಸದನದಲ್ಲಿಯೂ ವಿರೋದಗಳು ವ್ಯಕ್ತವಾಗಿರುವುದರಿಂದ ಕಾಯ್ದೆಯನ್ನು ತಿದ್ದುಪಡಿಗೆ ಒಳಪಡಿಸಲು ಸಾದ್ಯವಾಗದೆ, ಹೊರಡಿಸಲಾದ ಸುಗ್ರಿವಾಜೆÐಯÀನ್ನು ಅನಿವಾರ್ಯವಾಗಿ ಹಿಂತೆದುಕೊಳ್ಳಬೇಕಾಯಿತು.

2013ರ ಭೂ ಸ್ವಾದೀನ ಕಾಯ್ದೆಗೆ ತಿದ್ದುಪಡಿ ತರಲು ಹೊರಟಿರುವ ಹಿಂದಿನ ಉದ್ದೇಶ ಬಹುರಾಷ್ಟ್ರೀಯ ಕಂಪನಿಗಳಿಗೆ ತಮ್ಮ ಕೈಗಾರಿಕೆಗಳನ್ನು ಸ್ಥಾಪಿಸಲು ಅನೂಕುಲವಾಗುವಂತೆ ಸುಲಭವಾಗಿ ರೈತರಿಂದ ಭೂಮಿಯನ್ನು ವಶಪಡಿಸಿಕೊಳ್ಳಲು ಸಾದ್ಯವಾಗುವಂತೆ ಮಾಡುವುದಾಗಿದೆ. ದೇಶದ ಅಬಿವೃದ್ದಿಯ ನೆಪಹೊಡ್ಡಿ ಮಾದರಿಯ ದೇಶವನ್ನಾಗಿ ಮಾಡಲು ಹೊರ ದೇಶದ ಬೃಹತ್ ಕಂಪನಿಗಳ ಮೊರೆ ಹೋಗಿ ಪ್ರಸ್ತುತ ಕಾಲದ ಭೂ ಸ್ವಾದೀನ ಕಾಯ್ದೆ ಪಾಲಿಸದಿರುವುದು ನಮ್ಮನ್ನು ನಾವು ಮಾರಿಕೊಂಡಂತೆ.

ಉದಾರೀಕರಣದಿಂದ 20 ವರ್ಷಗಳಲ್ಲಿ ಒಟ್ಟು 70 ಲಕ್ಷ ಜನರು ವ್ಯವಸಾಯದಿಂದ ವಿಮುಖರಾಗಿದ್ದಾರೆ. ಪ್ರತಿದಿನ 2 ಸಾವಿರ ಜನರು ಕೃಷಿಯಿಂದ ಹೊರಹೊಗುತ್ತಿದ್ದಾರೆ. ಜಾರ್ಖಂಡಿನ ಸುಮಾರು 1 ರಿಂದ 3 ಲಕ್ಷ ಯುವತಿಯರು ದಿಲ್ಲಿಯಲ್ಲಿ 24 ಘಂಟೆಯೂ ದುಡಿಯುವಂತಾಗಿದೆ. ಉಕ್ಕು ತಯಾರಿಕ ಘಟಕಕ್ಕಾಗಿ ಒಡಿಶಾದಲ್ಲಿ ಖಾಸಗಿ ಕಂಪನಿಯೊಂದು ಬಡವರ 3,800 ಎಕರೆ ಕೃಷಿ ಭೂಮಿಯನ್ನು ಅತಿ ಕನಿಷ್ಠ ಬೆಲೆಗೆ ಖರೀದಿಸಿತ್ತು, ಆದರೆ ಆ ಜಾಗದಲ್ಲಿ ಘಟಕ ಸ್ಥಾಪನೆಯಾಗಲೇ ಇಲ್ಲ. 15 ವರ್ಷಗಳ ನಂತರ ಅದನ್ನು ವಿಶೇಷ ಆರ್ಥಿಕ ವಲಯವನ್ನಾಗಿ ಪರಿವರ್ತಿಸಿದ ಕಂಪನಿ ಅದನ್ನು ಪ್ರತಿ ಎಕರೆಗೆ 42 ಲಕ್ಷ ರೂ ಗಳಂತೆ ಬೇರೆ ಬೇರೆ ಉದ್ಯಮಗಳಿಗೆ ಮಾರಾಟ ಮಾಡಿದೆ.

ದೇಶದಲ್ಲಿ ರೈತರ ಆತ್ಮಹತ್ಯೆ 2008ರಲ್ಲಿ 298 ಮಹಿಳೆಯರು ಸೇರಿದಂತೆ 1737 ಜನರು, 2009ರಲ್ಲಿ 367 ಮಹಿಳೆಯರು ಸೇರಿದಂತೆ ಒಟ್ಟು 2282 ಜನರು, 2010ರಲ್ಲಿ 457 ಮಹಿಳೆಯರು ಸೇರಿದಂತೆ ಒಟ್ಟು 2385, 2014-15 ರವರೆಗೆ ಎನ್‍ಸಿಅರ್ ಪಿಯು ರೈತರ ಆತ್ಮಹತ್ಯೆಗಳು ಪ್ರಕರಣ ದಾಖಲಾತಿಯನ್ನು ಆರಂಬಿಸಿದ 1995 ರಿಂದ 2011 ರವರೆಗೆ ದೇಶದಲ್ಲಿ ಒಟ್ಟು 2,56,913 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅಂಕಿ-ಅಂಶಗಳನ್ನು ಬಿಡುಗಡೆ ಮಾಡಿದೆ. ದೇಶದಲ್ಲಿ 2011ರಿಂದ ಈಚೆಗೆ ರೈತರ ಆತ್ಮಹತ್ಯೆ ಪ್ರಕರಣಗಳು ಇನ್ನೂ ತೀವ್ರಗೊಂಡಿವೆ. ಇವು ಕೇವಲ ಕೈಗೆ ಸಿಕ್ಕಿರುವ ಅಂಕಿ ಅಂಶಗಳು ಕೈಗೆ ಸಿಗದಿರುವ ಅಂಕಿಗಳು ಇನ್ನೆಷ್ಟು?  ಕೈಗೆ ಸಿಗದಂತೆ ದಾರಿ ತಪ್ಪಿರುವ ಅಂಕಿಗಳಿಷ್ಟಿರಬಹುದು?
ಈಗಿನ ಕೇಂದ್ರ ಸರಕಾರ ಸಾಧಿಸಲು ಸಾದ್ಯವಾಗದ್ದನ್ನು ರಾಜ್ಯ ಸರಕಾರ ಸಾಧಿಸಲು ಮುಂದಾಗುತ್ತಿದೆ. ಉಳುವವನೇ ಭೂ ಹೊಡೆಯನ್ನನ್ನಾಗಿಸಿ ಎಂದು ಮತನೀಡಿದ ಅನ್ನದಾತರು ಕೇಳುತ್ತಿದ್ದಾರೆ. ಉಳುವರನ್ನು ಓಡಿಸಿ ಕಂಪನಿಗಳ ಹೆಗಲಿಗೆ ಭೂಮಿಯನ್ನು ವರ್ಗಾಯಿಸಿ ಬಹುರಾಷ್ಟ್ರೀಯ ಕಂಪನಿಯನ್ನು ಕೈ ಬೀಸಿ ಕರೆಯುವ ಪರಿಯಿಂದ ಇದು ತಿಳಿಯುತ್ತಿದೆ. ಬೆಂಗಳೂರಿನಲ್ಲಿ ಕರ್ನಾಟಕ ಸರಕಾರ ಸ್ಥಾಪಿಸಿದ ಲ್ಯಾಂಡ್ ಬ್ಯಾಂಕಿನಲ್ಲಿ  ನಡೆದ 2009ರ ವಿಶ್ವ ಹೂಡಿಕೆದಾರಾರು ಸಮಾವೇಶದಲ್ಲಿ 3,93000 ಕೋಟಿ ಹಣವನ್ನು ಹೂಡಿಕೆಯಾಗುತ್ತದೆ ಮತ್ತು 389 ಒಪ್ಪಂದಗಳಿಗೆ 40 ಖಾಸಗಿ ಕಂಪನಿಗಳು ಮತ್ತು ಕೆಲ ಸಾರ್ವಜನಿಕವಲಯದ ಸಂಸ್ಥೆಗಳು ಸಹಿ ಹಾಕಿವೆ.

ನಮ್ಮ ಸಂವಿಧಾನದ ಕಲಂ 63ರ 79,(ಏ), 79(ಬಿ)ಗಳು ಹೇಳುವ ಭೂಮಿಯ ಮಿತಿ ಮತ್ತು ಕೈಷಿಭೂಮಿಯನ್ನು ಹೊಂದುವ ಹಕ್ಕಿನ ಕುರಿತು ಏನೇ ಹೇಳಿದರೂ ವ್ಯಕ್ತಿ ಅಥವಾ ಕುಟುಂಬಗಳು ಅವುಗಳಂತೆ ಭೂಮಿಯನ್ನು ಹೊಂದಿದಾಗಲು ಕಲಂ 109 ಮಾತ್ರ ಅದು ಸೂಚಿಸುವ ಕೆಲ ಅಂಶಗಳಿಗೆ ರಿಯಾಯ್ತಿಯನ್ನು ನೀಡಿ ಇನ್ನಷ್ಟು ಜಮೀನು ಹೊಂದಲು ಅವಕಾಶವನ್ನು ನೀಡುತ್ತದೆ. ರಿಯಾಯ್ತಿಯನ್ನು ನೀಡಲು ಜಿಲ್ಲಾಧಿಕಾರಿಗಳಿಗೆ 5 ಪ್ರಕರಣಗಳಲ್ಲಿ ಅನುಮತಿಯ ಅಧಿಕಾರವನ್ನು ನೀಡುವಂತಿದೆ. 1)ಕೈಗಾರಿಕ ಅಬಿವೃದ್ದಿಗಾಗಿ 20 ಘಟಕಗಳು (108) 2) ಕೇಂದ್ರ ಹಾಗೂ ರಾಜ್ಯ ಸರಕಾರದ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಗಳಿಗೆ 04 ಘಟಕಗಳು (21.6ಎಕರೆ), 3) ದೇವಾಲಯ ನಿರ್ಮಾಣಕ್ಕಾಗಿ ನೊಂದಾಯಿತ ಸಂಸ್ಥೆಗಳಿಗೆ 01 ಘಟಕ(5.4 ಎಕರೆ), 4) ಗೃಹ ನಿರ್ಮಾಣ ಯೋಜನೆಗಳಿಗಾಗಿ 10 ಘಟಕಗಳ (54ಎಕರೆ), ಮತ್ತು 5) ಹೂ ಹಣ್ಣು ಬೇಸಾಯಕ್ಕೆ 20 ಘಟಕಗಳು (108 ಎಕರೆ). ಈ ಐದು ಪ್ರಕರಣದಿಂದ ಒಟ್ಟಾರೆ 55 ಘಟಕಗಳಷ್ಟು ಅಂದರೆ 297 ಎಕರೆ ಹೊಂದಲು ಅವಕಾಶ ನೀಡುತ್ತಿತ್ತು ಕಲಂ 109 ಕ್ಕೆ ತಿದ್ದುಪಡಿ ಮಾಡಿದ ಉದ್ದೇಶ ಈ ಮಿತಿಗಳನ್ನು ಗಮನಾರ್ಹವಾಗಿ ಏರಿಸುವುದು.
ಉದ್ಯಮ ಸ್ನೇಹಿ ದೇಶ ಮತ್ತು ರಾಜ್ಯಗಳ ಆಯ್ಕೆ ಮಾಡುವ ಮುನ್ನ ಅಲ್ಲಿನ ದಲಿತರ, ಅಲ್ಪಸಂಖ್ಯಾತರ, ರೈತರ, ಬಡವರ, ಮಹಿಳೆಯರ ಬದುಕಿನ ಕನಸುಗಳು ಕಮರಿಸುತ್ತಾ? ಅಲ್ಲಿನ ಪರಿಸರ ಮೇಲೆ ಜೀವ ಸಂಕುಲದ ಮೇಲೆ ಆಗುವ ಪರಿಣಾಮವನ್ನು ಲೆಕ್ಕಿಸದೆ ಬಂಡವಾಳವನ್ನು ಹೂಡಿಕೆ ಮಾಡುವ ಬಹುರಾಷ್ಟ್ರೀಯ ಕಂಪನಿಗಳನ್ನು ಬೆಳೆಸುವಲ್ಲಿ ಮಾತ್ರ ನಮ್ಮ ದೇಶ, ರಾಜ್ಯಗಳ ಅಭಿವೃದ್ದಿ ನಿಂತಿರುವುದಾದರೆ, ಅಂತಹ ಅಭಿವೃದ್ದಿ ಯೋಜನೆಗಳಲ್ಲಿ ತುಳಿತಕ್ಕೊಳಗಾದ ಸಮುದಾಯಗಳ ಪಾತ್ರವೇನು ಎಂಬುದರ ಕುರಿತು ಗಂಭೀರವಾಗಿ  ಚಿಂತಿಸುವ ಅಗತ್ಯವಿದೆ.
-ಎನ್. ಗುರುರಾಜ್ ತೂಲಹಳ್ಳಿ


 

 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x