ಮೂವರ ಕವಿತೆಗಳು: ಜಮುನಾ ಪ್ರದೀಪ್, ವೀಣಾ ಭಟ್, ಶ್ರೀವತ್ಸ ಕಂಚೀಮನೆ

ನನ್ನವಳು

ನನ್ನವಳು ಹೂರಾಣಿ

ನಾನವಳ ಆರಾಧಕ

ಆಸ್ವಾದಿಸುತ ಆಘ್ರಾಣಿಸುತ

ಆಧರಿಸುತ ಸವಿಯಬೇಕು ಅವಳ

ಸೌಂದರ್ಯದ ಸಿರಿಯ

ಬಿಂಕ ಬೆಡಗಿನ ಒಯ್ಯಾರದ ಪರಿಯ

ಹೇಳುವಾಸೆಯು ನನಗೆ ಬೆರಗುಕಂಗಳಲಿ-

"ಕಂಡಿಲ್ಲ ಜಗದಲ್ಲಿ ನಿನಗಿಂತ ಸುಂದರಿಯ!!"

 

ನನ್ನವಳು ಭಾವುಕಳು

ನಾನಾಗಲಾಸೆ

ಅವಳು ಬಯಸುವ ಸ್ವಪ್ನ

ನಾಚುತಲಿ  ನಗುನಗುತ

ಕನವರಿಸಿ ಕರಗಿ

ಮಿಡಿಯಲಿ ಮೌನವೀಣೆ

ಝೇಂಕರಿಸಿ ಖುಷಿಯಲ್ಲಿ

ಜಗವ ಮರೆತು..

 

ನನ್ನವಳು ಜಲಪಾತ

ನಾನಾಗಬೇಕು ಜಾರಿಸಾಗುವ

ನಡುವಿನ ಕಲ್ಲುಹಾಸಿನ ಧರೆಯು

ನನ್ನ ಅಪ್ಪುತಲಿ ಹೊಸಕುತಲಿ

ಬಳುಕುತಲಿ ಜಿಗಿಯಬೇಕು

ರೌಧ್ರ ರಭಸದಿ ನಲಿದು

ಗಮ್ಯ ಪ್ರೀತಿಯ ಸುರಿದು..

 

ನನ್ನವಳು ಹಣತೆ

ನಾನವಳ ಆವರಿಸಿದ ಪ್ರತಿಬಿಂಬದ

ಕಪ್ಪುಛಾಯೆ;

ನಾ ಕಪ್ಪಾದರೇನಂತೆ

ನೀನಲ್ಲವೇ ನನ್ನ ಜೀವದ

ಬಿಳಿಯ ಬೆಳಕಿನ ಗೆಳತಿ

ಬದುಕುವೆನು ನಾನು

ನೀನು ಉರಿಯುವವರೆಗೆ

ಹೆಚ್ಚಿಲ್ಲ ಆಸೆಯ ಗುರುತು

ನಿನ್ನ ಪ್ರೀತಿಯ  ಹೊರತು

 

ನನ್ನವಳು ಭೂಮಿ

ನಾನಲ್ಲವೇ ಅವಳಿಷ್ಟದ

ಏಕೈಕ ಪ್ರೇಮಿ ಪೂರ್ಣಚಂದ್ರ

ಅವಳಾಸೆಯಂತೆ ಸುತ್ತುತಲೇ ಇರುವೆನು

ಪ್ರತಿಕ್ಷಣವೂ ಎಡಬಿಡದೆ

ಇಟ್ಟಿರುವೆ ನನ್ನ ಜೀವ

ಅವಳ ಒಳಗೆ…

 

-ವೀಣಾ ಭಟ್ ಯಲ್ಲಾಪುರ

 

 

 

 

 

ಮಳೆಗೆ ನಿನ್ನ ನೆನಪು ಮತ್ತೆ ಮರುಕಳಿಸಿದೆ

ಮಳೆ ಬಂದು ನಿಂತಿದೆ ನಿನ್ನ ನೆನೆಪು ಕಾಡಿದೆ

ನನ್ನ ಬಾಳ ಪುಟದಲಿ ನಿನ್ನ ಹೆಜ್ಜೆ ಗುರುತಿದೆ

ಆ ಹೆಜ್ಜೆ ಗುರುತನು ನೆನಪಿಸಲು ಹಾಡಿದೆ…

ನಿಂತ ಮಳೆಯ ಮರದ ಹನಿ, ಮಧುರ ದನಿಯಲಿ

 

ಇಂದು ಭುವಿಯು ತೊಯ್ದಿದೆ ಹನಿಗಳಲಿ

ಅಂದು ನಾನು ಮಿಂದಿದ್ಧೆ ನಿನ್ನ ಪ್ರೀತಿಯ ಹೊಳೆಯಲಿ

ಎಷ್ಟು ತೊಯ್ದರು ಮುಗಿಯದ ದಾಹ

ಎಷ್ಟು ಮಿಂದರು ತಣಿಯದ ಮನ………..

 

ಮಳೆ ಹನಿ ನಿಂತಿದೆ ಮರದನಿ ಮುಗಿದಿದೆ

ಹನಿಗಳ ಕಂಪು ನಾಸಿಕವ ನಾಚಿಸಿದೆ

ಮನದಲಿ ನೀ ಇಟ್ಟ ಹೆಜ್ಜೆ ಗುರುತು

ನಿಲ್ಲದೇ ಸದ್ದು ಮಾಡಿದೆ

 

ಭುವಿಯು ಕಾದಿಹಳು ಹನಿಗಳ ಜಾತ್ರೆಗೆ

ಮತ್ತೆ ಮಳೆಯು…. ನಿನ್ನ ನೆನಪು….

ನಿನ್ನ ಬರುವಿಕೆಯ ಕನಸು……

ಆ ತಂಪಿನ ಒಡಲಾಳದಲಿ ಮುನಿಸು…..

 

-ಜಮುನಾ ಪ್ರದೀಪ್

 

 

 

ಆ ಕಪ್ಪು ಹುಡುಗಿಯ ಬಗ್ಗೆ…..
 
ಕಪ್ಪೆಂದು ಹಳಿಯದಿರಿ
ಅವಳ ಮನದ ಒಪ್ಪವನರಿಯದೆ…
ನನ್ನೆಡೆಗೆ ತುಡಿಯುತಿಹ ಅವಳ ಕಡುಗಪ್ಪು ಕಣ್ಣಲ್ಲಿ
ಒಲವ ಬೆಳದಿಂಗಳಿದೆ…
 
ಅಂದಿದ್ದೆ ನಾನಂದು –
ನನ್ನೆಲ್ಲ ತಪ್ಪುಗಳ ಮರೆತೊಮ್ಮೆ ನನ್ನೆಡೆಗೆ ನಗುವ ಚೆಲ್ಲು
ನನ್ನ ಸಾವಿಗೂ ಬಣ್ಣ ಬಂದೀತು ನಿನ್ನ ಒಲವಿಂದ…
ನಿನ್ನ ಬದುಕ ಬಣ್ಣವಾಗುವ ಬಯಕೆ ನನ್ನದು
ಕನಸಲೂ ಸಾವು ಸನಿಹ ಸುಳಿಯದಂತೆ…
ಅಂದದ್ದು ಆ ಕಪ್ಪು ಹುಡುಗಿ…
 
ನನ್ನ ಮನದ ಕತ್ತಲೆಯನೆಲ್ಲ
ತನ್ನ ನಗುವ ಕಣ್ಣ ಬೆಳಕಲ್ಲೆ
ದೂರ ಸರಿಸಿದ್ದು ಆ ಕಪ್ಪು ಹುಡುಗಿ…
 
ಮುಸ್ಸಂಜೆ ತಂಪಲ್ಲಿ
ಮೌನದ ತೇರಲ್ಲಿ
ಹೊಸ ಬದುಕ ಕನಸಿಗೆ ತೋರಣವ ಕಟ್ಟಿ
ಕಣ್ಣಲ್ಲೆ ಒಲವ ಭಾವಗೀತೆಯ ಹಾಡಿದ್ದು
ಆ ಕಪ್ಪು ಹುಡಿಗಿ…
 
ಬಡವ ನಾನು ಕೊಡುವುದಿಷ್ಟೇ
ಮುತ್ತಿನುಂಡೆಯ ಭೂರಿ ಭೋಜನ
ನಿತ್ಯ ಅವಳ ಮೃದು ಅಧರಕೆ…
ನಿನ್ನ ತೋಳ್ಬಲೆಯೆ ಇಂದ್ರನೋಲಗವೆಂದು
ತೃಪ್ತ ನಗೆಯಿಂದುಲಿವಳೆನ್ನಯ
ಆ ಕಪ್ಪು ಹುಡುಗಿ…
 
ಕಪ್ಪಾದರೂ ಅವಳು
ಕಪ್ಪಲ್ಲ ಅವಳ ಒಲವು…
ನನ್ನ ನಲಿವಲ್ಲಿ ಅವಳ ನಗುವಿದೆ…
ಅವಳ ನಗುವಲ್ಲೆ ನನ್ನ ಉಸಿರಿದೆ…
ಬದುಕ ಹಸಿರಿನ ಹೆಸರು
ಆ ಕಪ್ಪು ಹುಡುಗಿ…
 
-ಶ್ರೀವತ್ಸ ಕಂಚೀಮನೆ
ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

23 Comments
Oldest
Newest Most Voted
Inline Feedbacks
View all comments
ಈಶ್ವರ ಭಟ್

ಮೂರೂ ಕವನಗಳು ರಮ್ಯವಾಗಿದೆ, ಚೆನ್ನಾಗಿದೆ. ಇಂತಹ ಕವನಗಳು ಪ್ರಾಸಬದ್ಧವಾಗಿ;ಹಾಡುವ ಗೇಯತೆಯನ್ನು ಹೊಂದಿದರೆ ಇನ್ನೂ ಚಂದವಾದೀತು.

Raghavendra
11 years ago

ವೀಣಾ… ಕವನ ಸುಂದರವಾಗಿದೆ..
blog ನಲ್ಲಿ ಸದ್ಯ ಕಂಡಿಲ್ಲ  ಅಂದುಕೊಳ್ತಾ ಇದ್ದೆ….
ಇಲ್ಲಿ ಪ್ರತ್ಯಕ್ಷ……
ಚನ್ನಾಗಿದೆ.. ಕವಿತೆ…
 
ಜಮುನಾ ರವರ ಕವಿತೆಯ ತಲೆಬರಹಕ್ಕೇನೇ ಒಂದು 
ಮಧುರತೆಯಿದೆ….
 
ಇನ್ನು ಕಪ್ಪು ಹುಡುಗಿಯ ಮೋಡಿ ಬಗ್ಗೆ ಏನನ್ನಲಿ….
ಹುಡುಗನ ಕೈಲಿಂದ ಕವನ ಜಾರಿತು ಅಂದರೆ
ಮೋಡಿ ಎಷ್ಟಾಗಿದೆ ಅಂತ ಹೇಳಬೇಕೇ…..
ಅದೂ ಇಷ್ಟು ಚಂದದ್ದು…..
ವ್ಹಾ ವ್ಹಾ….!!!!!!

pravara
pravara
11 years ago

ಎಲ್ಲರ ಕವಿತೆಗಳೂ ಹೊಸತಾಗಿವೆ.
ಶ್ರೀವತ್ಸ್ ಅವರೆ, ಕವಿತೆ ಕಪ್ಪು ಹುಡುಗಿಯ ಬಿಳಿ ಮನಸನ್ನು ತೆರೆದಿಡುವ ಪರಿ ತುಂಬಾ ಹಿಡಿಸಿತು… ಒಂದು ಹಾಡು ಕೂಡ ನೆನಪಾಯ್ತು "ಆ ಕಪ್ಪು ಹುಡುಗಿ "ಮೈಸೂರು ಅನಂತಸ್ವಾಮಿಯವರು ಹಾಡಿದ್ದು"… ಒಳ್ಳೆ ಕವಿತೆ ಓದಿಸಿದ್ದಕ್ಕೆ ಪಂಜುಗೆ ಧನ್ಯವಾದಗಳು

M.S.Krishna Murthy
M.S.Krishna Murthy
11 years ago

ಎಲ್ಲಾ ಕವಿತೆಗಳು ಪ್ರೀತಿಯ ಬಗ್ಗೆ ಮತ್ತು ಅದನ್ನು ಪ್ರಕೃತಿಯ ಅಸಮದೊಡನೆ ಹೊಲಿಸಿವುವ ಪರಿ ಅದ್ಬುತವಾಗಿ ರಚಿಸಲ್ಪಟ್ಟಿದೆ. ವೀಣಾ ಅವರ ಕವಿತೆಯಲ್ಲಿ ಒಲವನ್ನು ನೀರು,ಬೆಳಕು,ಭೂಮಿ,ಚಂದ್ರನೊಂದಿಗೆ ಸಮೀಕರಿಸುವ ಪರಿ ತುಂಬಾ ಹಿಡಿಸಿತು."ನನ್ನ ಅಪ್ಪುತಲಿ ಹೊಸಕುತಲಿ" ಎಂಬಲ್ಲಿ ಹೊಸಕುತಲಿ ಎಂಬ ಪದಕ್ಕಿಂತಾ ಬೇರೆ ಪದ ಇದ್ದಿದ್ದರೆ ಚೆನ್ನಾಗಿತ್ತು ಅನ್ನಿಸಿತು. ಜಮುನಾ ಅವರ ಕವಿತೆ ಸಹ ಚೆನ್ನಾಗಿದೆ. ಶ್ರಿವತ್ಸ ಕಂಚಿಮನೆ ಭಾವುಕ ವ್ಯಕ್ತಿ ನನಗೆ ಕವಿತೆ ಬರೆಯಲು ಬರುವುದಿಲ್ಲ ಎಂದು ಹೇಳುತ್ತಲೆ ಒಂದು ಅದ್ಬುತ ಕವಿತೆ ಕೊಟ್ಟಿದ್ದಾರೆ. ಪ್ರೀತಿಗೆ ಬಣ್ಣವಿಲ್ಲ. ಬಣ್ಣದ ಕೀಳರಿಮೆಯನ್ನು ದೂರಮಾಡಲು ಪ್ರೀತಿಯೊಂದಕ್ಕೆ ಸಾಧ್ಯ ಎನ್ನುವ ಸುಂದರ ಬಾವ..ಎಲ್ಲಾ ಕವಿ ಮಿತ್ರರಿಗೂ ಅಭಿನಂದನೆಗಳು..

ramachandra shetty
ramachandra shetty
11 years ago

ಮೂರು ಕವಿತೆಗಳು ಚೆನ್ನಾಗಿವೆ..ಧನ್ಯವಾದಗಳು

Hussain
11 years ago

ಮುತ್ತು, ರತ್ನ , ಹವಳ …  

ಸಿ. ಎಸ್. ಮಠಪತಿ
ಸಿ. ಎಸ್. ಮಠಪತಿ
11 years ago

ವರ್ಣಗಳ ಮೇರೆ ಮೀರಿ ಹುಟ್ಟಿ ಬಂದ ಒಲವ ಗೀತೆಗಳು….ಇಷ್ಟವಾದವು…………

ಆಸು ಹೆಗ್ಡೆ

 
"ನನ್ನವಳು ಹಣತೆ
ನಾನವಳ ಆವರಿಸಿದ ಪ್ರತಿಬಿಂಬದ ಕಪ್ಪುಛಾಯೆ;"
ಈ ಉಪಮೆ ಯಾಕೋ ಅರ್ಥ ಆಗಲಿಲ್ಲ.

*****

"ಇಂದು ಭುವಿಯು ತೊಯ್ದಿದೆ ಹನಿಗಳಲಿ                                 
ಅಂದು ನಾನು ಮಿಂದಿದ್ಧೆ ನಿನ್ನ ಪ್ರೀತಿಯ ಹೊಳೆಯಲಿ                    
ಎಷ್ಟು ತೊಯ್ದರು ಮುಗಿಯದ ದಾಹ                                     
ಎಷ್ಟು ಮಿಂದರು ತಣಿಯದ ಮನ……….."                                       

ಬುವಿ – ಅಲ್ಪಪ್ರಾಣವಾಗಬೇಕು.
ಮಿಂದಿದ್ದೆ – ಅಲ್ಪಪ್ರಾಣವಾಗಬೇಕು
ತೊಯ್ದರು ಅಲ್ಲ ತೊಯ್ದರೂ ಆಗಬೇಕು
ಮಿಂದರು ಅಲ್ಲ ಮಿಂದರೂ ಆಗಬೇಕು

ಈ ಸಾಲುಗಳು ಹೀಗಿರಲಿ:

"ಇಂದು ಬುವಿಯು ತೊಯ್ದಿದೆ ಹನಿಗಳಲಿ
ಅಂದು ನಾನು ಮಿಂದಿದ್ದೆ ನಿನ್ನ ಪ್ರೀತಿಯ ಹೊಳೆಯಲಿ
ಎಷ್ಟು ತೊಯ್ದರೂ ಮುಗಿಯದ ದಾಹ
ಎಷ್ಟು ಮಿಂದರೂ ತಣಿಯದ ಮನ…"

*****
"ಕಣ್ಣಲ್ಲೆ ಒಲವ ಭಾವಗೀತೆಯ ಹಾಡಿದ್ದು
ಆ ಕಪ್ಪು ಹುಡಿಗಿ…"

ಈ ಸಾಲುಗಳು ಹೀಗಿರಲಿ:
"ಕಣ್ಣಲ್ಲೆ ಒಲವ ಭಾವಗೀತೆಯ ಹಾಡಿದ್ದು
ಆ ಕಪ್ಪು ಹುಡುಗಿ…"

"ಆ ಕಪ್ಪು ಹುಡುಗಿಯ ಬಗ್ಗೆ" ಕವನ ಮನಮುಟ್ಟಿತು.
ಓದು ಮುದನೀಡಿತು.
 

lahari
lahari
11 years ago

"ಬುವಿ – ಅಲ್ಪಪ್ರಾಣವಾಗಬೇಕು."
ಸ್ವಾಮೀ ಇದು ನಿಮ್ಮದೇ ಬ್ಲಾಗ್ ಬರಹವೊಂದರ ಸಾಲು:
http://athradi.wordpress.com/tag/%E0%B2%AD%E0%B3%81%E0%B2%B5%E0%B2%BF/
 
ಸಖೀ,
ಬಾನ ಚಂದಿರನೀ ಭುವಿಯ ಮೇಲೆ ಚೆಲ್ಲುವಂತೆ ಬೆಳದಿಂಗಳು
ಆಕೆ ಬಂದಾಗಲೆಲ್ಲಾ ನಮ್ಮ ಮನ-ಮನೆಯನು ಬೆಳಗಿಸುವಳು
 
ಬೇರೆಯವರ ತಟ್ಟೆಯಲ್ಲಿ ನೊಣ ಹುಡುಕುವ ಮೊದಲು……. ಅಲ್ಲವೇ..? 🙂

ಆತ್ರಾಡಿ ಸುರೇಶ ಹೆಗ್ಡೆ
Reply to  lahari

ಧನ್ಯವಾದಗಳು ಲಹರಿ.

ನಮ್ಮ ಬರಹಗಳಲ್ಲಿ ನುಸುಳುವ ತಪ್ಪುಗಳನ್ನು ಅನ್ಯರು ತಿಳಿಸಿದಾಗ ಖುಷಿಯಾಗುತ್ತದೆ ನನಗೆ. ನಾವು ಎಷ್ಟು ಕಾಳಜಿವಹಿಸಿದರೂ ತಪ್ಪುಗಳು ಆಗಿಯೇ ಆಗುತ್ತವೆ. ಅವನ್ನು ಸರಿಪಡಿಸಿಕೊಳ್ಳುವುದಕ್ಕೆ ಮುಕ್ತ ಮನಸ್ಸು ನನ್ನಲ್ಲಿದೆ. ತಪ್ಪುಗಳನ್ನು ಯಾರೂ ಮಾಡಿರುವುದಿಲ್ಲ. ಅವು ಆಗುತ್ತವೆ. ಅವುಗಳನ್ನು ಬೇರೆಯವರು ತಿಳಿಸದೇ ಇದ್ದರೆ ನಮ್ಮ ಅರಿವಿಗೆ ಬರುವುದೇ ಇಲ್ಲ.

ನನ್ನ ಆಸುಮನದಲ್ಲಿ ಇನ್ನೂ ತಪ್ಪುಗಳಿದ್ದರೆ, ತಿಳಿಸಿ ಸಹಕರಿಸಿ. ತಮಗೆ ಋಣಿಯಾಗಿರುತ್ತೇನೆ.

ನನ್ನಿಂದ ತಪ್ಪುಗಳು ಆಗುವುದಿಲ್ಲ ಎಂದು ನಾನೆಂದೂ ಹೇಳಿಯೇ ಇಲ್ಲ. ಹೇಳಲಾಗುವುದೇ ಇಲ್ಲ.

ಇಲ್ಲಿನ ತಟ್ಟೆಯಲ್ಲಿನ ನೊಣ ನನ್ನ ಕಣ್ಣಿಗೆ ಬಿದ್ದುದರಿಂದ, ನನ್ನ ತಟ್ಟೆಯ ನೊಣವನ್ನು ತಾವು ಹುಡುಕಿಕೊಟ್ಟಿರಿ. ಇಲ್ಲವಾದರೆ ಅದು ನನ್ನ ಅರಿವಿಗೆ ಬರುತ್ತಿರಲೇ ಇಲ್ಲ. 

ಪರಸ್ಪರರಿಗೆ ಸಹಕಾರಿಯಾಗಿ ಬಾಳುವುದೇ ಮುದನೀಡೂವ ವಿಷಯ.

ಮತ್ತೊಮ್ಮೆ ಹೃತ್ಪೂರ್ವಕ ಧನ್ಯವಾದಗಳು.

 

ಆತ್ರಾಡಿ ಸುರೇಶ ಹೆಗ್ಡೆ
Reply to  lahari

ಆಸುಮನಕ್ಕೆ ಭೇಟಿ ನೀಡಿದುದಕ್ಕಾಗಿ, ಪ್ರತ್ಯೇಕ ಧನ್ಯವಾದ!

ಆತ್ರಾಡಿ ಸುರೇಶ ಹೆಗ್ಡೆ
Reply to  lahari

ಇನ್ನೊಂದು ಮಾತು.

ಪಂಜುವಿನಲ್ಲಿ, ತಿದ್ದುಪಡಿ ಸೂಚಿಸುವುದು ಅನಗತ್ಯ ಎಂದು ತಮಗನಿಸಿದ್ದರೆ ತಿಳಿಸಿಬಿಡಿ.

ಇಲ್ಲಿ ಇನ್ನು ಸೂಚಿಸುವುದಿಲ್ಲ.

ಅದರಿಂದ ನನ್ನ ಸ್ವಲ್ಪ ಅಮೂಲ್ಯ ಸಮಯ ಹಾಗೂ "ಇಂಟರ್ನೆಟ್ ಪ್ಯಾಕ್" ನ ಉಳಿತಾಯವಾಗುತ್ತವೆ.

ಆದರೆ, ನನ್ನ ಬ್ಲಾಗ್  ಆಸುಮನದಲ್ಲಿನ ತಪ್ಪುಗಳನ್ನು ತಿಳಿಸುವುದಕ್ಕೆ ತಮಗೆ ಸದಾ ಸ್ವಾಗತವಿದೆ.

ಅದನ್ನು ದಯವಿಟ್ಟು ನಿಲಿಸದಿರಿ.

ಆಸು ಹೆಗ್ಡೆ
Reply to  content-editor

ಧನ್ಯವಾದಗಳು ನಟರಾಜ್!

pravara
pravara
11 years ago
Reply to  lahari

ನಿಜವಾದ ಬರಹಗಾರನಿಗೆ ಸಲಹೆಗಳನ್ನು ಸ್ವೀಕರಿಸಿ ತೆದ್ದಿಕೊಳ್ಳುವ ಪ್ರಯತ್ನ ಮಾಡುವುದು ಒಳಿತು ಹಾಗು ಕವಿತೆ ಪಕ್ವವಾಗಲು ಸಹಕಾರಿಯಾದೀತು…. ಅದನ್ನು ಬಿಟ್ಟು ಸಲಹೆ ನೀಡಿದವರಿಗೆ ಎದುರು ಮಾತನಾಡಿದರೆ ಅರ್ಥಹೀನ, ದಯವಿಟ್ಟು ಪ್ರತಿಕ್ರಿಯೆಗಳನ್ನು ಧನಾತ್ಮಕವಾಗಿ ಸ್ವೀಕರಿಸಿ….

ಆಸು ಹೆಗ್ಡೆ
Reply to  pravara

ಪ್ರವರ,
ತಲೆ ಕೆಡಿಸಿಕೊಳ್ಳಬೇಡಿ
ನಾನೇ ಕೆಡಿಸಿಕೊಂಡಿಲ್ಲ.
ಸ್ವೀಕರಿಸಿದರೆ ಸ್ವೀಕರಿಸಿದವರಿಗೆ ಸೇರುತ್ತದೆ.
ಸ್ವೀಕರಿಸದ್ದು ನನ್ನಲ್ಲೇ ಉಳಿಯುತ್ತದೆ.
ಇಲ್ಲಿ ಮುಂದೆ ಅದೆಷ್ಟೋ ಮಂದಿ ಭೇಟಿ ನೀಡಲಿದ್ದಾರೆ. ಅವರಲ್ಲಿ ಯಾರಿಗಾದರೂ ಸಹಕಾರಿಯಾದೀತು, ಅನ್ನುವ ಆಶಯ ನನ್ನದು.
ತಪ್ಪು ಯಾವುದು ಹಾಗೂ  ಸರಿ ಯಾವುದು ಅನ್ನುವುದು ಮುಂದಿನ ಜನಾಂಗಕ್ಕೆ ತಿಳಿದಿರಲಿ.ಅಷ್ಟೇ.

 

pravara
pravara
11 years ago

ನಾನು ಬರೆದದ್ದೇ ಶ್ರೇಷ್ಠವೆಂದುಕೊಳ್ಳುವುದು ಮಹಾ ಮೂರ್ಖತನ, ತಪ್ಪುಗಳಿದ್ದರೆ ತಿದ್ದಿಕೊಳ್ಳಿ, ದೊಡ್ಡವರ ಮಾತುಗಳನ್ನು ಗೌರವಿಸಿ… ಇಲ್ಲವಾದರೆ ನಿಮ್ಮ ಅಹಂನಲ್ಲಿಯೇ ನೀವು ಕಳೆದು ಹೋಗುತ್ತೀರಿ..

parthasarathy N
parthasarathy N
11 years ago

ಎಲ್ಲವು ಸುಂದರ
ಈಶ್ವರ ಭಟ್ ರವರು ಹೇಳಿದಂತೆ ಕವನಗಳನ್ನು ಹಾಡುವ ದಾಟಿಯಲ್ಲಿದ್ದರೆ ಚೆನ್ನವೇನೊ, ಬಹುಷಃ  ರಾಗಹಾಕಬಲ್ಲವರಿದ್ದರೆ ಈ ಕವನಗಳನ್ನು ಹಾಡಬಲ್ಲರೇನೊ 

Badarinath Palavalli
11 years ago

ಕಂಚೀಮನೆ ಅವರ ಕವನ ಓದಿ, ಯಾಕೋ ನಮ್ಮೂರ ಪದ್ದಿ ಮತ್ತು ರೂಕ್ಮಿಣಿ ನೆನಪಾದರು. ಕಪ್ಪು ಬಣ್ಣದ ಅವರ ಮದುವೆಗಳು ತುಂಬಾ ನಿಧಾನವಾದದ್ದು ನೆನಪಾಯಿತು. ಮನಸ್ಸಿನಲ್ಲಿ ನಿಲ್ಲುವ ಕವನವಿದು.

ಸುಮತಿ ದೀಪ ಹೆಗ್ಡೆ

ಮೂವರ ಕವನಗಳು ಚೆನ್ನಾಗಿದೆ ……………… 🙂

Santhoshkumar LM
11 years ago

ಮೂರು ಕವಿತೆಗಳು ಚೆನ್ನಾಗಿವೆ.

23
0
Would love your thoughts, please comment.x
()
x