ಹನಿಯೂರು ಚಂದ್ರೇಗೌಡರ “ಸೋಲಿಗರು: ಬದುಕು ಮತ್ತು ಸಂಸ್ಕೃತಿ” ಕೃತಿಯ- ಒಂದು ವಿಮರ್ಶೆ: ಡಾ. ಕೆ.ಮಧುಸೂದನ ಜೋಷಿ

 
ಬಹುಮುಖಿಯಾಗಿ  ಬಹುರೂಪಿಯಾಗಿ ಬೆಳೆದು ಬಂದ ಕನ್ನಡ ಸಾಹಿತ್ಯ ಕಾಲದಿಂದ ಕಾಲಕ್ಕೆ ತಕ್ಕಂತೆ ಬದಲಾಗುತ್ತ, ಪ್ರಸ್ತುತಗೊಳ್ಳುತ್ತ ಬಂದಿದ್ದರಿಂದಲೇ ಅದು ಜೀವಂತಿಕೆಯನ್ನು ಕಾಯ್ದುಕೊಂಡು 8 ಜ್ಞಾನಪೀಠಗಳನ್ನು ಏರಿ ಭರತೀಯ ಸಾಹಿತ್ಯ ಸಾಮ್ರಾಜ್ಯದ ಮೊದಲ ಚಕ್ರವರ್ತಿಯಾಗಿ ಮೆರೆದಿದೆ; ಮೆರೆಯುತ್ತಿದೆ. ಕಾವ್ಯ, ಕತೆ, ಕಾದಂಬರಿ, ನಾಟಕ, ವಿಮರ್ಶೆ, ಸಂಶೋಧನೆ, ಆತ್ಮಚರಿತ್ರೆ, ಜೀವನಚರಿತ್ರೆ, ಗೀತನಾಟಕ, ಕಥನಕವನ, ಪ್ರವಾಸಕಥನ, ಜನಾಂಗೀಯ ಅಧ್ಯಯನ…. ಹೀಗೆ ಹತ್ತು ಹಲವು ಮುಖಗಳಲ್ಲಿ ಹೊಮ್ಮಿಬಂದ ಕನ್ನಡ ಸಾಹಿತ್ಯವಾಹಿನಿ ಮೈದುಂಬಿಕೊಳ್ಳುತ್ತ, ಮನಗಳನ್ನು ತುಂಬುತ್ತ ಸಾಗಿದೆ.

ಆದರೆ ಈ ಎಲ್ಲ ಸಾಹಿತ್ಯದ ಪ್ರಕಾರಗಳಲ್ಲಿಯೇ ಅಪರೂಪ ಎನ್ನಿಸುವಷ್ಟು ಕೃಷಿ ನಡೆದದ್ದು, ಪ್ರವಾಸಕಥನ ಮತ್ತು ಜನಾಂಗೀಯ ಅಧ್ಯಯನಗಳಲ್ಲಿ. ಈ ಕೊರತೆಯನ್ನು ಸಮರ್ಥವಾಗಿ ತುಂಬಿಕೊಡುವ ನಿಟ್ಟಿನಲ್ಲಿ ಸಂಶೋಧಕ ಹನಿಯೂರು ಚಂದ್ರೇಗೌಡರು ಇಟ್ಟಿರುವ ಮೊದಲ ಹೆಜ್ಜೆಯೇ ಅವರ “ಸೋಲಿಗರು: ಬದುಕು ಮತ್ತು ಸಂಸ್ಕೃತಿ” ಎಂಬ ಕ್ಷೇತ್ರಕಾರ್ಯಾಧಾರಿತ ಜನಾಂಗೀಯ ಅಧ್ಯಯನ ಕೃತಿ.

ಆದಿಮಾನವ-ಬುಡಕಟ್ಟುಮಾನವ ಮತ್ತು ಆಧುನಿಕ ಮಾನವ ಇವು ಮಾನವ ಬೆಳೆದುಬಂದ ದಾರಿಯ 3 ಅವಸ್ಥೆಗಳು. ಈ ಹಂತಗಳೋಂದಿಗೆ ಸಹಜವಾಗಿಯೇ ಭಾಷೆ ಕೂಡಾ ಆಂಗಿಕ, ವಾಚಿಕ, ಆಹಾರ್ಯ ಅಂದರೆ ದೇಹಭಾಷೆ, ಆಡುವಭಾಷೆ ಮತ್ತು ವೇಷ-ಭೂಷಣಗಳ ಪ್ರತಿಮಾತ್ಮಕ ಭಾಷೆಯಾಗಿ ಬೆಳೆದುಬಂತು.
“ಬುಡಕಟ್ಟು” ಹೆಸರೇ ಸೂಚಿಸುವಂತೆ ನೆಲೆಯನ್ನು-ಅಸ್ತಿತ್ವವನ್ನು ಭದ್ರಪಡಿಸಿಕೊಳ್ಳುವ ಹಂತ. ಇದರ ಮುಂದಿನ ಹಂತವೇ ಗ್ರಾಮಗಳು ಮತ್ತು ನಗರಗಳ ರಚನೆ. ಗಿರಿಜನರು ಅಂದರೆ, ಬೆಟ್ಟಗುಡ್ಡಗಳಲ್ಲಿ ವಾಸಿಸುವವರು ಎಂಬರ್ಥ ಕೊಡುವ ಜನಾಂಗಗಳಲ್ಲಿ “ಸೋಲಿಗರು” ಮುಖ್ಯರಾಗುತ್ತಾರೆ. ನ್ಯಾಯಮೂರ್ತಿ ವೆಂಕಟಾಚಲಯ್ಯನವರ ಲೋಕಾಯುಕ್ತ ತಂಡದ ಸದಸ್ಯರಾಗಿದ್ದ ಡಾ. ಎಚ್.ಸುದರ್ಶನ್ ಸೋಲಿಗರ ಅಭಿವೃದ್ಧಿಗಾಗಿ ಶ್ರಮಿಸಿಯೇ “ಮ್ಯಾಗ್ಸೆಸೆ”ಪ್ರಶಸ್ತಿ ಪಡೆದರು.

ಆಧುನಿಕಯುಗದ ನಾಗಾಲೋಟದ ನಡುವೆಯೂ ಇಂಥ ಬುಡಕಟ್ಟು ಜನಾಂಗದವರು ನಮ್ಮ ನಡುವೆ ಅಂದಿನಂತೆಯೇ ಬದುಕುತ್ತಿದ್ದಾರೆ. ಬದಲಾವಣೆಯನ್ನು ಒಪ್ಪದ, ನಾಗರಿಕರನ್ನು ಕಂಡರೆ ಭೀತಿಯಿಂದ ದೂರಹೋಗುವ ಜನಾಂಗ ಸೋಲಿಗರು. ಇಂಥ ಸೋಲಿಗರ ಬಗ್ಗೆ ಪಾಶ್ಚಾತ್ಯರೂ ಸಂಶೋಧನಾಧ್ಯಯನ ಕೈಗೊಂಡಿದ್ದಾರೆ. 

10 ಅಧ್ಯಾಯಗಳಲ್ಲಿ ಸೋಲಿಗರನ್ನು ಅನಾವರಣಗೊಳಿಸಿರುವ ಸಂಶೋಧಕ ಹನಿಯೂರು ಚಂದ್ರೇಗೌಡರು ಸಾಮಾಜಿಕ, ಭೌಗೋಳಿಕ, ನೈಸರ್ಗಿಕ, ಪಾರಂಪರಿಕ, ಧಾರ್ಮಿಕ… ಹೀಗೆ ವಿಭಿನ್ನ ನೆಲೆಗಳಲ್ಲಿ ಅವರ ಬದುಕನ್ನು ಕಟ್ಟಿಕೊಡಲು ಯತ್ನಿಸಿದ್ದಾರೆ. ಬುಡಕಟ್ಟು ಜನಾಂಗಗಳಲ್ಲಿ ಸ್ಥಾವರ(ನೆಲೆನಿಂತ) ಮತ್ತು ಜಂಗಮ(ಅಲೆಮಾರಿ) ಎಂಬ 2 ವಿಧಗಳಿದ್ದು, ಹಸಲರು, ಸಿದ್ಧಿಗಳು, ಕೊರಗರು, ಹಾಲಕ್ಕಿ, ಸೋಲಿಗರು ಪ್ರಮುಖರಾಗಿದ್ದಾರೆ. ನಮ್ಮ ನಾಡಿನಲ್ಲಿ ಅಂಥ 35 ಬುಡಕಟ್ಟು ಜನಾಂಗಗಳಿದ್ದು, ಅವರಲ್ಲಿ ಸೋಲಿಗರ ಬದುಕಿನ ಮೇಲೆ ವಿಭಿನ್ನವಾಗಿ ಬೆಳಕನ್ನು ಚೆಲ್ಲಲು ಇಲ್ಲಿ ಚಂದ್ರೇಗೌಡ ಯತ್ನಿಸಿದ್ದಾರೆ. 

ಸಂಪೂರ್ಣ ದೇಸೀಯವಾದ ಬದುಕನ್ನು ನಡೆಸುವ ಸೋಲಿಗರು ನಿಜವಾದ “ಮಣ್ಣಿನ ಮಕ್ಕಳು”. ಅರಣ್ಯದ ಉತ್ಪನ್ನಗಳ ಮಾರಾಟ ಇವರ ಪ್ರಮುಖ ಆರ್ಥಿಕ ಸಂಪನ್ಮೂಲ. ಕರ್ನಾಟಕದಲ್ಲಿ ಸೋಲಿಗರು ಹೆಚ್ಚಾಗಿ ವಾಸಿಸುವುದು ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ, ಚಾಮರಾಜನಗರ, ಯಳಂದೂರು, ಗುಂಡ್ಲುಪೇಟೆ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ. ಇವರ ನೆಲೆಗಳನ್ನು “ಪೋಡು” ಎನ್ನುತ್ತಾರೆ. ಕಾಡಿನ ಅಂಚು ಮತ್ತು ನಡುವೆ ಈ ಪೋಡುಗಳು ನಿರ್ಮಾಣವಾಗುತ್ತವೆ. 

ಬಿದಿರಿನ ಸೋಲೆಯಲ್ಲಿ ಜನಿಸಿದವರು ಸೋಲಿಗರು, ಬಿದಿರಿನ ಸೋಲೆಯನ್ನು ಬಟ್ಟೆಯಂತೆ ಬಳಸುತ್ತಿದ್ದವರು ಸೋಲಿಗರು ಮಂತಾಗಿ “ಸೋಲಿಗ”ಪದದ ನಿಷ್ಪತ್ತಿಯನ್ನು ಸೂಚಿಸುವ ಸಂಶೋಧಕ ಚಂದ್ರೇಗೌಡರು, ಈ ಜನಾಂಗದವರು ವಾಸಿಸುವ ಮನೆಗಳ ಮುಂದೆ ಬೆಳೆಸುವ ಹೂಗಿಡಗಳನ್ನು ಆಧರಿಸಿ ಸೋಲಿಗರ ಕುಲಗಳು ಭಿನ್ನಗೊಳ್ಳುತ್ತವೆ, ಗುರ್ತಿಸಲ್ಪಡುತ್ತವೆ ಎನ್ನುತ್ತಾರೆ. ಇಂಥ ಅನೇಕ ವಿಸ್ಮಯಕಾರಿ ಅಂಶಗಳ ಸಂಸ್ಕøತಿ ಸೋಲಿಗರದಾಗಿದೆ.  

ಸೆಳುಕ, ತೆನೆಯ, ಸೂರ, ಹಾಲ ಮುಂತಾಗಿ ಸೋಲಿಗರಲ್ಲಿ ಉಪಪಂಗಡಗಳಿವೆ. ಈ 6 ಕುಲಗಳಲ್ಲಿ ಸೆಳುಕರು ಯಜಮಾನ ಸ್ಥಾನದಲ್ಲಿದ್ದಾರೆ. ಒಂದು ಪೊಡಿನ ಸಮಸ್ಯೆ ಅಲ್ಲೇ ಇತ್ಯರ್ಥವಾಗುತ್ತದೆ. 
ರಾಗಿಮುದ್ದೆ, ರೊಟ್ಟಿ, ಅನ್ನ, ಗಂಜಿಯೊಂದಿಗೆ ಹಣ್ಣುಗಳು(ಹಲಸು,ಬಾಳೆ) ಗೆಡ್ಡೆ-ಗೆಣಸುಗಳು ಪ್ರಮುಖ ಆಹಾರವಾಗಿವೆ. 50ಕ್ಕೂ ಹೆಚ್ಚು ವಿಧದ ಸೊಪ್ಪುಗಳು ಇವರ ಆಹಾರದ ವೈಶಿಷ್ಟ್ಯ.
ಯಾವ ಸಣ್ಣವಿಷಯವನ್ನೂ ಅಲಕ್ಷಿಸದೆ, ಯಾವುದನ್ನೂ ಪುನರಾವರ್ತಿಸದೆ ನಿರೂಪಿಸಿರುವುದು ಈ ಕೃತಿಯ ವಿಶಿಷ್ಟ ಅಂಶ. ಕಾಡಿನ ನಡುವೆ ಕಾಡುಪ್ರಾಣಿಗಳ ನಡುವೆ, ಎದೆಗುಂದದೆ ಬದುಕುವ ಈ ಜನಾಂಗ ಸೋಲನ್ನೇ ಅರಿಯದ ಜನಾಂಗ. ಬದುಕನ್ನು ಎದುರಿಸುವುದು ಹೇಗೆ ಎಂಬುದನ್ನು ಕಲಿಸುವುದೇ ಸೋಲಿಗರ ಶಿಕ್ಷಣಪದ್ಧತಿಯಾಗಿದ್ದು ವಿಶೇಷ.

50 ಕ್ಕೂ ಹೆಚ್ಚು ವಿಧದ ಸೊಪ್ಪುಗಳಂತೆಯೇ 36ಕ್ಕೂ ಹೆಚ್ಚು ಜಾತಿಯ ಮರಗಳನ್ನೂ ಸೋಲಿಗರು ಗುರ್ತಿಸಬಲ್ಲರು. ಮದುವೆ, ಇವರಲ್ಲಿ “ಆಯ್ಕೆಯೇ” ಹೊರತು “ಹೇರಿಕೆಯಲ್ಲ” ಎನ್ನುವುದು ತುಂಬ ಮುಖ್ಯವಾದ ಅಂಶ. ಹುಡುಗ-ಹುಡುಗಿ ಪರಸ್ಪರ ಆಯ್ಕೆಮಾಡಿಕೊಂಡು ಎಲ್ಲೋ ಓಡಿಹೋಗುತ್ತಾರೆ. ಅಂತರ್ಜಾತಿ ವಿವಾಹ ಇವರಲ್ಲಿ ನಿಷಿದ್ಧ. ಒಪ್ಪಂದದ ಮದುವೆ ಮತ್ತು ಕೂಡಾವಳಿ ಮದುವೆ ಎಂದು 2 ವಿಧಗಳಿದ್ದು, ಉಡುಗೊರೆಯ ಪದ್ಧತಿ ಇರಲಿಲ್ಲ. ಇತ್ತೀಚೆಗೆ ನಾಗರಿಕ ಸಮಾಜದ ಪ್ರಭಾವದಿಂದಲೋ ಏನೋ ಅಲ್ಲಿಯೂ ಉಡುಗೊರೆ ಪದ್ಧತಿ ಪ್ರಾರಂಭವಾಗಿದೆ. ಇತ್ತೀಚೆಗೆ ದೂರದರ್ಶನದ ಖಾಸಗಿ ಚಾನೆಲ್‍ನಲ್ಲಿ ಪ್ರಸಾರವಾದ “ಹಳ್ಳಿಹೈದ ಪ್ಯಾಟೆಗ್ ಬಂದ” ಕಾರ್ಯಕ್ರಮಕ್ಕೆ ಬಲವಂತವಾಗಿ ಸೋಲಿಗರ ಹುಡುಗನನ್ನು ಕರೆತಂದು ಬರಲಾಗಿತ್ತು. ಕೊನೆಗೆ ಅವನು ನಾಡಲ್ಲೂ ಇರಲಾಗದೆ, ಪೋಡಿಗೂ ಹೋಗಲಾಗದೆ ಒದ್ದಾಡಿ ದುರಮತ ಅಂತ್ಯವನ್ನು ಕಂಡ. ಮುಗ್ಧಜನಾಂಗಗಳ ದುರ್ಬಳಕೆ ನಾಗರಿಕ ಸಮಾಜದಲ್ಲಿ  ನಿರಂತರ. ಅದಕ್ಕೆಂದೇ ಅವರು ಕಾಡುಪ್ರಾಣಿಗಳಿಗಿಂತ ನಗರದವರಿಗೆ ಹೆಚ್ಚು ಹೆದರಿ ಅವರಿಂದ ದೂರವಿರಲು ಬಯಸುತ್ತಾರೆ. ಕಾಡುಪ್ರಾಣಿಗಳಿಗಿಂತ ನಾಗರಿಕನೇ ಅತ್ಯಂತ ಅಪಾಯಕಾರಿಯಾಗುತ್ತಿದ್ದಾನೆ.

ಮದುವೆಗೆ ಇರುವಷ್ಟೇ ಮುಕ್ತಮನಸ್ಸು ವಿಚ್ಛೇದನಕ್ಕೂ ಇರುವುದು ಸೋಲಿಗರ ವೈಶಿಷ್ಟ್ಯ. ವಿಚ್ಛೇದನವನ್ನು ಇಬ್ಬರೂ ಬಯಸಬಹುದು. ಆ ಬಗ್ಗೆ ನ್ಯಾಯಪಂಚಾಯ್ತಿ ನಡೆದು, ಹೊಂದಾಣಿಕೆಗೆ ಮತ್ತೆ ಒಂದು ಅವಕಾಶ ಕೊಟ್ಟು ಅನಿವಾರ್ಯವಾದರೆ ವಿಚ್ಛೇದನವನ್ನು ಸಮ್ಮತಿಸುತ್ತಾರೆ. ಈ ಹಂತದಲ್ಲಿ ತಪ್ಪು ಮಾಡಿದವರಿಗೆ ನಿಗದಿಪಡಿಸಿದ ಇಂತಿಷ್ಟು ಹಣವನ್ನು ದಂಡವಾಗಿ ವಿಧಿಸುತ್ತಾರೆ!.

ಮಕ್ಕಳ ಕಾಯಿಲೆಯನ್ನು ಅದರ ಚಲನವಲನದಿಂದಲೇ ಗುರ್ತಿಸುವ ಸೋಲಿಗರು ಜೇನು-ಶುಂಠಿಗಳನ್ನು ಔóಧವಾಗಿ ಬಳಸುವ, ಮಥ್ರಪೂಜೆ ಮಾಡಿಸುವುದು ರೂಢಿಯಲ್ಲಿತ್ತು. ಇತ್ತೀಚೆಗೆ ಅವರೂ ಆಸ್ಪತ್ರೆಯ ಮೆಟ್ಟಿಲು ತುಳಿಯುತ್ತಿದ್ದಾರೆ.  

ದುಡಿದೇ ಬದುಕಬೇಕಾದ, ದುಡಿಮೆಯೇ ಬದುಕಾದ ಸೋಲಿಗರಲ್ಲಿ ವೃದ್ಧಾಪ್ಯ ಒಂದು ಹೊರೆ, ಶಾಪ. ಆದರೂ ವೃದ್ಧರನ್ನು ನಿರ್ಲಕ್ಷಿಸದೆ ಆದರಿಸುತ್ತಾರೆ. ಇದನ್ನು ಲೇಖಕ ಹನಿಯೂರು ಚಂದ್ರೇಗೌಡ ಅವು ಹೇಳುವಂತೆ, “ವೃದ್ಧಾಪ್ಯವು ಆರ್ಥಿಕ ಮಾಲ್ಯವನ್ನು ಕುಗ್ಗಿಸುತ್ತದೆ, ಸಾಮಾಜಿಕ ಮೌಲ್ಯವನ್ನು ಹೆಚ್ಚಿಸುತ್ತದೆ”. ಇಂಥವು ನಾಗರಿಕ ಸಮಾಜಕ್ಕೆ ಪಾಠವಾಗಬೇಕು. ಸಮೃದ್ಧ ಶ್ರೀಮಂತಿಕೆ ಇದ್ದೂ ತಂದೆ-ತಾಯಿಯರನ್ನು ವೃದ್ಧಾಶ್ರಮಗಳಿಗೆ ತಳ್ಳುವ ಕ್ರೂರಮನಸ್ಸುಗಳು ಸೋಲಿಗರಿಂದ ನೀತಿಪಾಠ ಕಲಿಯಬೇಕಿದೆ.

ಸಮಾಧಿಗಳ ಜಾಗದಲ್ಲಿ ಗಿಡಗಳನ್ನು ಬೆಳೆಸುವ ಸೋಲಿಗರ ಪರಿಸರ ಪ್ರೀತಿ ಮಾದರಿ ಮತ್ತು ಆದರ್ಶವಾದುದು. 
ಭಾರತ ಗಿಡಮೂಲಿಕೆಗಳಿಗೆ ಔಷಧೀಯ ಸಸ್ಯಗಳಿಗೆ ಹೆಸರಾದ ದೇಶ. ಇದಕ್ಕೆ ರಾಮಾಯಣದಲ್ಲಿನ “ಸಂಜೀವಿನಿ ಪರ್ವತ” ಪ್ರಸಂಗವೇ ಒಂದು ಸಾಕ್ಷಿ.

ಬಹುತೇಕ ಸೋಲಿಗರು ತಮ್ಮ ಆರೋಗ್ಯದ ರಕ್ಷಣೆಗಾಗಿ, ರೋಗಗಳಿಂದ ಮುಕ್ತರಾಗಲು ಈ ಗಿಡಮೂಲಿಕೆಗಳನ್ನೇ ಆಧರಿಸಿದ್ದಾರೆ. ಪೌಷ್ಟಿಕ ಆಹಾರದ ಕೊರತೆ ಈ ಜನಾಂಗದ ಅನಾರೋಗ್ಯಕ್ಕೆ ಪ್ರಮುಖ ಕಾರಣವಾಗಿದೆ. 
ಸಣ್ಣಪುಟ್ಟ ವಿಷಯಗಳನ್ನು ಲಂಬಿಸಿಕೊಂಡು ಹೋಗಿದ್ದು, ಈ ಕೃತಿಯ ಒಂದು ಸಣ್ಣದೋಷ ಎಂದೇ ಹೇಳಬಹುದಾದರೂ ತೀರಾ ವಸ್ತುನಿಷ್ಠವಾಗಿ ವಿಶ್ಲೇಷಣೆ ಮಾಡುವ ಉದ್ದೇಶ ಇದಕ್ಕೆ ಕಾರಣವಿರುವ ಸಾಧ್ಯತೆಯಿದೆ. ಋತುಮತಿ, ಗರ್ಭಿಣಿಯಂಥ ಪ್ರಸಂಗಗಳನ್ನು ಈ ಮಾತಿಗೆ ಉದಾಹರಿಸಬಹುದು.

ಬೇರು, ಎಲೆ, ಚಕ್ಕೆಗಳು ಸೋಲಿಗರ ಪ್ರಮುಖ ಔಷಧಿಮೂಲಗಳಾಗಿವೆ. ಭಾರತದ ದೇಸೀ ವೈದ್ಯಕೀಯ ಪದ್ಧತಿ ಗಿಡಮೂಲಿಕೆಗಳನ್ನಾಧರಿಸಿರುವುದನ್ನು ಗಮನಿಸಬೇಕು. ಇವುಗಳ ಜೊತೆಗೆ ಹಸುವಿನ ಗಂಜಳ, ಜೇನಿನ ಮೇಣ, ಉಡದ ಎಣ್ಣೆ, ಬೆಕ್ಕಿನ ಮಾಂಸವನ್ನೂ ಔಷಧ ಮೂಲಗಳನ್ನಾಗಿ ಬಳಸುತ್ತಿರುವುದನ್ನೂ ಇಲ್ಲಿ ಲೇಖಕ ಚಂದ್ರೇಗೌಡ ವಿವರಿಸಿರುವುದು, ಈ ಮಾಹಿತಿ ಅಚ್ಚರಿದಾಯಕವಾಗಿ ಕಾಣುತ್ತದೆ.

ನಮ್ಮ ಭಾರತದ ಅದರಲ್ಲೂ ಕನ್ನಡ ನಾಡಿನ ನೆಲಮೂಲ ಸಂಸ್ಕøತಿಯ ತವನಿಧಿಯಾದ ಜನಪದರು, ಯಾವುದೇ ಆಂಗ್ಲವೈದ್ಯಕೀಯ ಪರಿಹಾರೋಪಾಯಗಳನ್ನು ಅರಿತವರಲ್ಲ. ದೇಸಿ ಔಷಧಿಗಳನ್ನು ಗಿಡಮೂಲಿಕೆಗಳನ್ನು ಆಧರಿಸಿಯೇ ಅವರು ಶತಾಯುಷಿಗಳಾಗಿ ಬಾಳಿದರು. ಆದರೆ ಆಂಗ್ಲವೈದ್ಯ ಪದ್ಧತಿಯ ಮೊರಹೋಗಿರುವ ನಾವು…..?

ಅರಿಶಿಣ, ತುಳಸಿ, ಬೇವು ಮುಂತಾದವನ್ನು ಪರಿಚಯಿಸಿದ ದೇಶ ಭಾರತ. ಚರ್ಮಕ್ಕೆ ಕಾಂತಿ ಅರಿಶಿಣದಿಂದಾದರೆ, ನೆಗಡಿ, ಕೆಮ್ಮಿಗೆ ರಾಮಬಾಣ ತುಳಸಿಯಿಂದ. ಹಲ್ಲಿನ ಆರೋಗ್ಯಕ್ಕೆ ಬೇವಿನಕಡ್ಡಿ. ಹೀಗೆ, ಅವುಗಳಿಂದಾಗುವ ಲಾಭಗಳನ್ನು ನಮ್ಮವರು ಆಗಲೇ ಅರಿತುಕೊಂಡದ್ದು ಅಗಾಧವಾದ ಅಂಶವಲ್ಲವೇ? ಅದರಲ್ಲೂ ತುಳಸಿ, ಓಝೋನ್ ಪದರದ ಪ್ರಬಲ ರಕ್ಷಕವಾಗಿದೆ!.

ನೂರಾರು ರೀತಿಯ ಅರಣ್ಯ ಉತ್ಪನ್ನಗಳನ್ನು ಸುಲಭವಾಗಿ ಗುರ್ತಿಸುವ ಕೌಶಲ್ಯ ಹೊಂದಿದ್ದ ಸೋಲಿಗರು, ಅವನ್ನೇ ವ್ಯಾಪಾರ-ವಾಣಿಜ್ಯಿಕ ಸರಕನ್ನಾಗಿಸಿಕೊಂಡಿದ್ದರು. ಜೇನುತುಪ್ಪ, ಸೀಗೆಕಾಯಿ, ಅಂಟುವಾಳಕಾಯಿ, ಅರಳೆಕಾಯಿ, ಕಾಡುಕರಿಬೇವು ಇವರ ಪ್ರಮುಖ ಬಂಡವಾಳಗಳು. ಈ ವಿವರಣೆ ಈ ಕೃತಿಯನ್ನು ವಿಶಿಷ್ಟವಾಗಿಸುತ್ತದೆ. ಸಾಮಾಜಿಕ, ಧಾರ್ಮಿಕ ಅಂಶಗಳಿಗೆ ಬಹುತೇಕ ಜನಾಂಗೀಯ ಅಧ್ಯಯನಗಳು ಸೀಮಿತಗೊಂಡರೆ, ಆರ್ಥಿಕ ಕ್ಷೇತ್ರವನ್ನೂ ಆಯ್ದುಕೊಂಡದ್ದು ಒಂದು ರೀತಿಯಲ್ಲಿ ಅಧ್ಯಯನಕ್ಕೆ ಪರಿಪೂರ್ಣತೆಯನ್ನು ಒದಗಿಸಿದೆ. ಅದಕ್ಕಾಗಿ ಹನಿಯೂರರನ್ನು ಅಭಿನಂದಿಸುವೆ.

ಸೊಪ್ಪು, ಜೇನು ಮುಂತಾದವನ್ನು ವಿಂಗಡಿಸಿದಂತೆ ಸೋಲಿಗರು ಕಾಡನ್ನೂ ವಿಂಗಡಿಸಿ, ಹೆಸರಿಸಿರುವುದುಂಟು. ದೊಡ್ಡಕಾನು, ಬೆಗ್ಗಾಡು, ತೋಪುಕಾಡು, ಬೋಳುಕಾಡು ಇತ್ಯಾದಿಯಾಗಿ ಅವುಗಳ ನೆಲೆ-ಹಿನ್ನೆಲೆ-ಸ್ವರೂಪಗಳನ್ನಾಧರಿಸಿ ವಿಂಗಡಿಸುತ್ತಾರೆ. ಈ ವಿಂಗಡಣೆಯಲ್ಲಿ ಸೋಲಿಗರ ಗ್ರಹಿಕೆ, ಸೂಕ್ಷ್ಮತೆಗಳ ಜಾಣ್ಮೆ ಎದ್ದುಕಾಣುತ್ತದೆ. 

ಇತ್ತೀಚೆಗೆ ಸೋಲಿಗರಲ್ಲಿ ಸಹಕಾರ ಸಂಘಗಳು ಹುಟ್ಟಿಕೊಳ್ಳುತ್ತಿದ್ದು, ಅವರ ಸರ್ವತೋಮುಖ ಅಭಿವೃದ್ಧಿಗಾಗಿಯೇ “ಲ್ಯಾಂಪ್ ಸೊಸೈಟಿ” ಶ್ರಮಿಸುತ್ತಿದೆ. ಇದು ಅವರಿಂದ ಅರಣ್ಯೋತ್ಪನ್ನಗಳನ್ನು ಖರೀದಿಸಿ, ಮಾರಿ ಲಾಭವನ್ನು ಅವರ ಪ್ರಗತಿಗೇ ಬಳಸುತ್ತಿರುವ ಅಂಶವನ್ನು ಈ ಕೃತಿಯಲ್ಲಿ ಕಾಣಬಹುದು. 

ಸೋಲಿಗರು ಅಲೆಮಾರಿತನವನ್ನು ಕೈಬಿಟ್ಟು, ಸ್ಥಿರವಾದ ಪೋಡುಗಳಲ್ಲಿ ನೆಲೆನಿಂತು ಕೃಷಿಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ರಾಗಿ, ನವಣೆ, ಕಡಲೆಕಾಯಿ ಬೆಳೆಗಳನ್ನು ಮುಖ್ಯವಾಗಿ ಬೆಳೆಯುತ್ತಿದ್ದಾರೆ. ಮೊದಲು ಬೇಟೆ, ಆಮೇಲೆ ಕೃಷಿ ಸಲಿಗರ ಜೀವನೋಪಾಯದ ದಾರಿಯಾಗಿದ್ದವು. 

ಎಲ್ಲ ಆಚರಣೆಗಳಂತೆ ಧಾರ್ಮಿಕವಾದ ಸೋಲಿಗರ ಆಚರಣೆಗಳೂ ತೀರಾ ವಿಭಿನ್ನವಾಗಿವೆ. ರೊಟ್ಟಿಹಬ್ಬದಲ್ಲಿ ಸಾವಿರಾರು ರೊಟ್ಟಿಗಳನ್ನು ತಯಾರಿಸಿ, ಸಾಮೂಹಿಕ ಭೋಜನ ಮಾಡುತ್ತಾರೆ. ಇದು ನಮ್ಮ ಸಂಸ್ಕøತಿಯ ಧ್ಯೇಯವಾಕ್ಯವಾದ “ಸಹನಾ ಭವತು ಸಹನೌ ಭುನಕ್ತು ಸಹವೀರ್ಯಂ ಕರವಾವಹೈ” ಅನ್ನು ಸಮರ್ಥಿಸುತ್ತ, ಪ್ರತಿನಿಧಿಸುತ್ತದೆ. 

ತಾರೆಮರ, ನೇರಳೆಮರ, ನೆಲ್ಲಿಮರಗಳನ್ನು ಹೆಚ್ಚಾಗಿ ಪೂಜಿಸುವ ಸೋಲಿಗರು, ಹುಲಿಯಹೆಜ್ಜೆ ಕಂಡರೆ ನಮಸ್ಕರಿಸುತ್ತಾರೆ(ಮಾದೇಶ್ವರನ ವಾಹನ ಹುಲಿಯಾದುದರಿಂದ!). ಗಿಣಿಯನ್ನೂ ಸಹ ಪೂಜಿಸುತ್ತಾರೆ. 
ಇಂತಹ ಜನಾಂಗೀಯ ಅಧ್ಯಯನದ ಕ್ಷೇತ್ರಕಾರ್ಯಗಳು ನಮ್ಮಲ್ಲಿನ ವೈವಿಧ್ಯಮಯ ಸಂಪತ್ತನ್ನು ನಮಗೆ ಪರಿಚಯಿಸಿಕೊಡುತ್ತವೆ. ಮಾದೇಶ್ವರಬೆಟ್ಟ, ಬಿಳಿಗಿರಿರಂಗಸ್ವಾಮಿ ಬೆಟ್ಟ ಮತ್ತು ನಂಜನಗೂಡು ಸೋಲಿಗರ ಪ್ರಮುಖ ಆಕರ್ಷಣೆ ಮತ್ತು ಆಚರಣೆಗಳ ನೆಲೆವೀಡುಗಳಾಗಿವೆ. ಈ ಜಾತ್ರೆಗಳಲ್ಲಿ ತಮಟೆ, ಹಾಡು, ಕುಣಿತಗಳಲ್ಲಿ ಜನ ಮೈಮರೆಯುತ್ತಾರೆ. ರಂಗಪ್ಪ, ಮಾದಪ್ಪ, ಜಡೆಯಪ್ಪ ಈ ಮೂರೂ ಸೋಲಿಗರ ದೈವಗಳು. ಕೋಟೆಮಾರಮ್ಮ, ಕೊಟ್ಟದಮಾಸ್ತಮ್ಮ, ಮಾರಮ್ಮ, ಚಿಕ್ಕದೇವಮ್ಮ ಸೋಲಿಗರ ಪ್ರಮುಖ ದೇವತೆಗಳಾಗಿದ್ದಾರೆ. 
ಹಿಂದೂಧರ್ಮದ ಭಾಗವಾಗಿ,  ಪರಿಶಿಷ್ಟ ಪಂಗಡ(ಎಸ್.ಟಿ)ವಾಗಿ ಗುರ್ತಿಸಿಕೊಂಡಿರುವ ಸೋಲಿಗರು, ನರ-ಸುರ-ಚಂದ್ರ-ಸೂರ್ಯ-ದೇವ…. ಹೀಗೆ 5 ಲೋಕಗಳಿವೆ ಎಂದು ನಂಬುತ್ತಾರೆ. ಇವು ಒಂದಾಗಿ ನರಲೋಕವಾಗಿ ಸೃಷ್ಟಿಕರ್ತನಿಂದ ಸೃಷ್ಟಿಯಾಗುತ್ತವೆ ಎಂಬ ವಿಚಿತ್ರ ನಂಬಿಕೆ ಇವರಲ್ಲಿದೆ. ಭೂಮಿ ಅಲ್ಲದೆ ಬೇರೆ ಗ್ರಹಗಳು, ನಕ್ಷತ್ರಗಳು ಇರುವ ಬಗ್ಗೆ ಇವರಲ್ಲಿನ ಆಲೋಚನೆಗಳು ಗಮನಾರ್ಹ. 

ಹಾಡು-ಕತೆಗಳೊಂದಿಗೆ ಜನಪದರ ಜಾಣ್ಮೆಯ ಸೃಷ್ಟಿಗಳಾದ ಒಗಟು, ಸೋಲಿಗರಲ್ಲೂ ಸೃಷ್ಟಿಯಾಗಿವೆ. “ಉದ್ದುದ್ದೋನೆ ಉರಿಮುಕದೋನೆ ಸುದಿಕೊಡೋ ಸೂಳೆಮಗನೆ” ಇದಕ್ಕೊಂದು ಉದಾಹರಣೆ. (ಉತ್ತರ: ಮೆಣಸಿನಕಾಯಿ)ಸೋಲಿಗರ ಆಟಗಳೂ ವಿಶಿಷ್ಟವಾಗಿವೆ. ಒಳಾಂಗಣ, ಹೊರಾಂಗಣ ಎಂಬೆರಡು ವಿಧಗಳ ಆಟಗಳಿದ್ದು, ಅಳಗುಳಿಮಣೆ, ಗುಚ್ಚಿಕಲ್ಲು, ಗಟ್ಟಾಮಣೆ, ಕುಂಟೆಬಿಲ್ಲೆ, ಮರಕೋತಿಯಾಟ ಮುಂತಾದವು ಹೊರಾಂಗಣ ಆಟಗಳಗಿವೆ.

ಪ್ರತಿ ಮೂರು ವರ್ಷಕ್ಕೊಮ್ಮೆ ನೆಲೆ ಬದಲಿಸುತ್ತ, ಅಲೆಮಾರಿಗಳಾಗಿದ್ದ ಸೋಲಿಗರು ಇತ್ತೀಚೆಗೆ ಸ್ಥಾವರ(ಒಂದೆಡೆ ನೆಲೆನಿಂತ) ಜೀವಿಗಳಾಗುತ್ತಿದ್ದಾರೆ. ಆಧುನಿಕತೆಗೆ ಕಾಲಕ್ರಮೇಣವಾಗಿ ಒಗ್ಗಿಕೊಳ್ಳುತ್ತಿರುವ ಇವರು ಹಿಂದುಳಿದ ಗುಂಪಿಗೆ ಸೇರಿದ್ದು, ಇವರ ಪೋಡುಗಳಿಗೆ ಸರ್ಕಾರಿ ಶಾಲೆಗಳು ಪ್ರವೇಶ ಪಡೆದಿವೆ. ಅಲ್ಲದೆ, ಆರೋಗ್ಯ ಕೇಂದ್ರ, ಸಾರಿಗೆ ಸಂಪರ್ಕ, ಮನರಂಜನಾ ಸಾಧನಗಳು, ಶಿಕ್ಷಣ ಸೌಲಭ್ಯಗಳನ್ನೂ ಪಡೆಯುತ್ತಿರುವ ಸೋಲಿಗರು, ಇನ್ನೂ ಅನೇಕ ಸಾಮಾಜಿಕ ಕಳಂಕಗಳಿಂದ ಮುಕ್ತರಾಗಿಲ್ಲದಿರುವುದು ಬೇಸರದ ಸಂಗತಿ. ಬಾಲ್ಯವಿವಾಹ, ಬಾಲಕಾರ್ಮಿಕ, ಜೀತ ಇತ್ಯಾದಿ ಸಾಮಾಜಿಕ ಅನಿಷ್ಟಗಳನ್ನು ಮುಂದುವರೆಸಿಕೊಂಡು ಬರುತ್ತಿದ್ದಾರೆ. ಇನ್ನೂ ಪೂರ್ಣಪ್ರಮಾಣದಲ್ಲಿ ಸಾರಿಗೆ ಸಂಪರ್ಕ, ಶಿಕ್ಷಣ ಸೌಲಭ್ಯ, ವಿದ್ಯುತ್ ಸೌಲಭ್ಯ, ವಸತಿ ಸೌಲಭ್ಯಗಳು ಇವರನ್ನು ತಲುಪದೆ ಅತಂತ್ರಸ್ಥಿತಿಯಲ್ಲಿದ್ದಾರೆ. 

ಹೀಗೆ ಸಮಾಜದ ಮುಖ್ಯವಾಹಿನಿಯಿಂದ ದೂರವೇ ಉಳಿದ, ಸಾಂಸ್ಕøತಿಕ ಸಂಪನ್ನತೆಯ ಆಗರವಾಗಿರುವ ಸೋಲಿಗರ ಬದುಕು-ಸಂಸ್ಕøತಿಯ ಕುರಿತು ಸಮಗ್ರವಾದ ವಿಷಯ-ವಿಚಾರಗಳನ್ನು ಕಟ್ಟಿಕೊಡುವ ಮೂಲಕ ಸರ್ಕಾರ, ಸಮಾಜಗಳ ಲಕ್ಷ್ಯವನ್ನು ಸೆಳೆಯುವಲ್ಲಿ ಯುವ ಸಂಶೋಧಕ ಹನಿಯೂರು ಚಂದ್ರೇಗೌಡ ಸಫಲರಾಗಿದ್ದಾರೆ. 

—————–
ಪುಸ್ತಕದ ಹೆಸರು    : ಸೋಲಿಗರು: ಬದುಕು ಮತ್ತು ಸಂಸ್ಕøತಿ
ಲೇಖಕರ ಹೆಸರು    : ಪ್ರೊ. ಹನಿಯೂರು ಚಂದ್ರೇಗೌಡ
ಪ್ರಕಾಶಕರು        : ಜಾನಪದ ಪೋಷಣಾ ಪರಿಷತ್ತು, ಹನಿಯೂರು.
ಪ್ರಕಟಣಾ ವರ್ಷ    : 2014-15
ಪುಸ್ತಕದ ಬೆಲೆ        : 150 ರೂಪಾಯಿಗಳು.
ಪುಟಗಳು        : 120
————————

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

6 Comments
Oldest
Newest Most Voted
Inline Feedbacks
View all comments
ಗಂಗಾಧರ್
ಗಂಗಾಧರ್
8 years ago

ಹನಿಯೂರು ಚಂದ್ರೇಗೌಡರ ಪುಸ್ತಕವನ್ನು ವಿವರವಾಗಿ ಪರಿಶೀಲಿಸಿ ಉಪಕರಿಸಿದ್ದೀರಿ.ಕ್ರಿಯಾಶೀಲ ಯುವ ಪ್ರತಿಭೆಯಾಗಿರುವ ಚಂದ್ರೇಗೌಡರೊಂದ ನಮ್ಮ ನಿರೀಕ್ಷೆಗಳು ಬಹಳವಿವೆ.ಅವರಿಗೆ ಶುಭವಾಗಲಿ.

ಡಾ.ಹನಿಯೂರು ಚಂದ್ರೇಗೌಡ
ಡಾ.ಹನಿಯೂರು ಚಂದ್ರೇಗೌಡ
2 years ago

ಧನ್ಯವಾದಗಳು ಸರ್

ಚಿತ್ತಯ್ಯ
ಚಿತ್ತಯ್ಯ
8 years ago

ನನಗೆ ಪಿಹೆಚ್ .ಡಿ ಆಂಶಿಕ ಅಧ್ಯಯನಕ್ಕಾಗಿ ಸೋಲಿಗರ ಬದುಕು ಮತ್ತು ಸಂಸ್ಕೃತಿ ಪುಸ್ತಕದ ಅಗತ್ಯವಿದೆ ದಯವಿಟ್ಟು ಸಂಪರ್ಕಿಸುವ ಬಗೆ ತಿಳಿಸಿರಿ.

ಡಾ.ಹನಿಯೂರು ಚಂದ್ರೇಗೌಡ
ಡಾ.ಹನಿಯೂರು ಚಂದ್ರೇಗೌಡ
2 years ago

ಕರೆ ಮಾಡಿ

8088594302 ಡಾ.ಹನಿಯೂರು ಚಂದ್ರೇಗೌಡ

ಮಹೇಂದ್ರ ಎ.ಎಸ್
ಮಹೇಂದ್ರ ಎ.ಎಸ್
6 years ago

ನನಗೆ ಸೋಲಿಗರ ಜೀವನದ ಉಗಮ ಮತ್ತು ಅವರ ಜೀವನ ಕ್ರಮದ ಬಗ್ಗೆ ತಿಳಿಯಲು ಸೋಲಿಗರ ಬದುಕು ಮತ್ತು ಸಂಸ್ಕ್ರತಿ ಪುಸ್ತಕದ ಅವಶ್ಯಕತೆ ಇದೆ ಅದನ್ನು ತರಿಸಿಕೊಳ್ಳುವ ಬಗೆ ಹೇಗೆಂಬುದನ್ನು ದಯಮಾಡಿ ತಿಳಿಸಿ.

ಡಾ.ಹನಿಯೂರು ಚಂದ್ರೇಗೌಡ
ಡಾ.ಹನಿಯೂರು ಚಂದ್ರೇಗೌಡ
2 years ago

ಕರೆ ಮಾಡಿ

8088594302 ಡಾ.ಹನಿಯೂರು ಚಂದ್ರೇಗೌಡ

6
0
Would love your thoughts, please comment.x
()
x