ಝೆನ್ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ಮಹಾಪ್ರಭುವಿನ ಮಕ್ಕಳು
ಚಕ್ರವರ್ತಿಯ ಖಾಸಾ ಶಿಕ್ಷಕನಾಗಿದ್ದವನು ಯಾಮಾಓಕ. ಅವನು ಕತ್ತಿವರಿಸೆ ನಿಪುಣನೂ ಝೆನ್‌ನ ಗಂಭೀರವಾದ ವಿದ್ಯಾರ್ಥಿಯೂ ಆಗಿದ್ದ.
ಅವನ ಮನೆಯೋ ಶುದ್ಧ ನಿಷ್ಪ್ರಯೋಜಕರಾಗಿ ಅಂಡಲೆಯುವವರ ಬೀಡಾಗಿತ್ತು. ಅವನ ಹತ್ತಿರ ಕೇವಲ ಒಂದು ಜೊತೆ ಉಡುಪುಗಳಿದ್ದವು, ಏಕೆಂದರೆ ಅಂಡಲೆಯುವವರು ಅವನನ್ನು ಯಾವಾಗಲೂ ಬಡತನದಲ್ಲಿಯೇ ಇರಿಸುತ್ತಿದ್ದರು.
ಯಾಮಾಓಕನ ಉಡುಪು ಬಲು ಜೀರ್ಣವಾಗಿರುವುದನ್ನು ಗಮನಿಸಿದ ಚಕ್ರವರ್ತಿಯು ಹೊಸ ಉಡುಪುಗಳನ್ನು ಖರೀದಿಸಲು ಸ್ವಲ್ಪ ಹಣ ಕೊಟ್ಟನು. ಮುಂದಿನ ಸಲ ಚಕ್ರವರ್ತಿಯ ಬಳಿ ಬಂದಾಗಲೂ ಯಾಕಾಓಮ ಹಿಂದಿನ ಜೀರ್ಣವಾದ ಉಡುಪುಗಳಲ್ಲಿಯೇ ಇದ್ದನು.
“ಹೊಸ ಉಡುಪುಗಳು ಏನಾದವು ಯಾಕಾಓಮ?” ಕೇಳಿದನು ಚಕ್ರವರ್ತಿ.
“ಮಹಾಪ್ರಭುಗಳ ಮಕ್ಕಳಿಗೆ ನಾನು ಉಡುಪುಗಳನ್ನು ಪೂರೈಸಿದೆ” ಯಾಮಾಓಕ ವಿವರಿಸಿದ.

*****

೨. ಧೂಳಿನೊಂದಿಗೆ ಅಂಟಿಕೆ (Attachment) ಇಲ್ಲ
ಚೀನೀ ಗುರು ಟ್ಯಾಂಗ್ ವಂಶದ ಝೆಂಗೆಟ್ಸು ತನ್ನ ವಿದ್ಯಾರ್ಥಿಗಳಿಗಾಗಿ ಈ ಮುಂದಿನ ಸೂಚನೆಗಳನ್ನು ಬರೆದ
* ಪ್ರಪಂಚದಲ್ಲಿ ಬಾಳಿದರೂ ಪ್ರಪಂಚದ ಧೂಳಿಗೆ ಅಂಟಿಕೊಳ್ಳದೆಯೇ ಇರುವುದು ಝೆನ್‌ನ ನಿಜವಾದ ವಿದ್ಯಾರ್ಥಿಯ ವೈಲಕ್ಷಣ್ಯ.
* ಇನ್ನೊಬ್ಬನ ಒಳ್ಳೆಯ ಕಾರ್ಯವನ್ನು ನೋಡಿದಾಗ ಅವನ ಮೇಲ್ಪಂಕ್ತಿ ಅನುಸರಿಸುವಂತೆ ನಿನ್ನನ್ನು ನೀನೇ ಪ್ರೋತ್ಸಾಹಿಸು. ಇನ್ನೊಬ್ಬನ ತಪ್ಪು ಕಾರ್ಯದ ಕುರಿತು ಕೇಳಿದಾಗ ಅದನ್ನು ಅನುಕರಿಸದಂತೆ ನಿನಗೆ ನೀನೇ ಸೂಚಿಸಿಕೊ.
* ಕತ್ತಲೆ ಕೋಣೆಯಲ್ಲಿ ಒಂಟಿಯಾಗಿ ಇರುವಾಗಲೂ ಗೌರವಾನ್ವಿತ ಅತಿಥಿಯೊಬ್ಬನ ಮುಂದೆ ಇರುವಾಗ ಎಂತಿರುವಿಯೋ ಅಂತೆಯೇ ಇರು.ನಿನ್ನ ಭಾವನೆಗಳನ್ನು ಅಭೀವ್ಯಕ್ತಿಗೊಳಿಸು, ಆದರೆ ಅದು ನಿನ್ನ ನೈಜ ಸ್ವಭಾವಕ್ಕೆಹೊಂದಾಣಿಕೆ ಆಗುವಂತಿರಬೇಕೇ ವಿನಾ ಅತಿಯಾಗಬಾರದು.
* ಬಡತನ ಒಂದು ಸಂಪತ್ತು. ಆರಾಮದ ಜೀವನಕ್ಕೆ ಅದನ್ನು ಎಂದೂ ವಿನಿಮಯಿಸದಿರು.
ಒಬ್ಬ ಮೂರ್ಖನಂತೆ ತೋರಿದರೂ ನಿಜವಾಗಿ ಮೂರ್ಖನಲ್ಲದೇ ಇರಬಹುದು. ಆತ ತನ್ನ ವಿವೇಕವನ್ನು ಬಲು ಜಾಗರೂಕತೆಯಿಂದ ಸಂರಕ್ಷಿಸುತ್ತಿರಬಹುದು.
* ಸದ್ಗುಣಗಳು ಸ್ವಶಿಸ್ತಿನ ಫಲಗಳು, ಅವು ಅಂತರಿಕ್ಷದಿಂದ ಮಳೆ ಅಥವ ಹಿಮ ಬೀಳುವಂತೆ ಉದುರುವುದಿಲ್ಲ.
* ವಿನೀತತೆ ಎಲ್ಲ ಸದ್ಗುಣಗಳ ತಳಹದಿ. ನೆರೆಹೊರೆಯವರಿಗೆ ನಿಮ್ಮನ್ನು ನೀವು ತಿಳಿಯಪಡಿಸುವ ಮೊದಲೇ ಅವರು ನಿಮ್ಮನ್ನು ಆವಿಷ್ಕರಿಸುವಂತಿರಬೇಕು.
*ಉದಾತ್ತ ಹೃದಯವು ಎಂದೂ ತನ್ನನ್ನು ತಾನು ಬಲವಂತವಾಗಿ ಮುಂಚೂಣಿಯಲ್ಲಿ ಇರುವಂತೆ ಮಾಡುವುದಿಲ್ಲ. ಅದರ ಪದಗಳಾದರೋ ಅಪರೂಪಕ್ಕೆ ಪ್ರದರ್ಶಿಸಲ್ಪಡುವ ಅತ್ಯಮೂಲ್ಯವಾದ ದುರ್ಲಭ ರತ್ನಗಳಾಗಿರುತ್ತವೆ.
* ಪ್ರಾಮಾಣಿಕ ವಿದ್ಯಾರ್ಥಿಗೆ ಪ್ರತಿಯೊಂದು ದಿನವೂ ಮಂಗಳಕರ ದಿನವಾಗಿರುತ್ತದೆ. ಸಮಯ ಕಳೆಯುತ್ತದಾದರೂ ಅವನೆಂದೂ ಹಿಂದೆ ಬೀಳುವುದಿಲ್ಲ.ಉನ್ನತ ಕೀರ್ತಿಯೇ ಆಗಲಿ ಅವಮಾನವೇ ಆಗಲಿ ಅವನನ್ನು ಅಲುಗಾಡಿಸುವುದಿಲ್ಲ.
* ನಿನ್ನನ್ನು ನೀನೇ ಖಂಡಿಸು, ಇನ್ನೊಬ್ಬನನ್ನಲ್ಲ. ಸರಿ ಮತ್ತು ತಪ್ಪುಗಳನ್ನು ಚರ್ಚಿಸಬೇಡ.
* ಕೆಲವು ಅಂಶಗಳು ಸರಿಯಾದವೇ ಆಗಿದ್ದರೂ ಅನೇಕ ತಲೆಮಾರುಗಳ ಕಾಲ ತಪ್ಪು ಎಂಬುದಾಗಿ ಪರಿಗಣಿಸಲ್ಪಡುತ್ತಿದ್ದವು.ಸದಾಚಾರ ನಿಷ್ಠತೆಯ ಮೌಲ್ಯ ಅನೇಕ ಶತಮಾನಗಳ ನಂತರವೂ ಗುರುತಿಸಲ್ಪಡುವ ಸಾಧ್ಯತೆ ಇರುವುದರಿಂದ ತಕ್ಷಣ ಮೆಚ್ಚುಗೆ ದೊರೆಯಬೇಕೆಂಬುದಾಗಿ ಹಂಬಲಿಸುವ ಆವಶ್ಯಕತೆ ಇಲ್ಲ.

* ಕರ್ಮಗಳನ್ನು ಮಾಡತ್ತಾ ಜೀವಿಸು, ವಿಶ್ವದ ಮಹಾನ್‌ ನಿಯಮಕ್ಕೆ ಪರಿಣಾಮಗಳನ್ನು ನಿರ್ಧರಿಸಲು ಬಿಡು. ಶಾಂತವಾಗಿ ಚಿಂತನೆ ಮಾಡುತ್ತಾ ಪ್ರತಿಯೊಂದು ದಿನವನ್ನೂ ಸಾಗಿಹೋಗು.

*****

೩. ನಿಜವಾದ ಪವಾಡ
ಬಾಂಕೈ ರ್ಯೂಮಾನ್‌ ದೇವಾಲಯದಲ್ಲಿ ಪ್ರವಚನ ನೀಡುತ್ತಿದ್ದಾಗ ಜರಗಿದ ವಿದ್ಯಮಾನ ಇದು. ಬಾಂಕೈನ ಪ್ರವಚನ ಕೇಳಲು ಬಹು ದೊಡ್ಡ ಸಂಖ್ಯೆಯಲ್ಲಿ ಜನ ಸೇರುತ್ತಿದ್ದದ್ದನ್ನು ನೋಡಿ ಶಿಂಶು ಪೂಜಾರಿಯೊಬ್ಬ ಕರುಬುತ್ತಿದ್ದ. ಅವನಾದರೋ ಪ್ರೇಮದ ಬುದ್ಧನ (Buddha of love) ಹೆಸರನ್ನು ಪುನರುಚ್ಚರಿಸುತ್ತಿರುವುದರಿಂದ ಮೋಕ್ಷಪ್ರಾಪ್ತಿಯಾಗುತ್ತದೆ ಎಂಬುದಾಗಿ ನಂಬಿದ್ದವ. ಎಂದೇ, ಅವನು ಬಾಂಕೈನೊಂದಿಗೆ ವಾದ ಮಾಡುವ ಅಪೇಕ್ಷೆ ಉಳ್ಳವನಾಗಿದ್ದ.

ಈ ಇರಾದೆಯಿಂದ ಪೂಜಾರಿ ಬಂದಾಗ ಬಾಂಕೈ ಪ್ರವಚನ ನೀಡುತ್ತಿದ್ದ. ಆದರೂ ಅವನು ಅಲ್ಲಿ ಮಾಡಿದ ಗಲಾಟೆಯಿಂದಾಗಿ ಬಾಂಕೈ ತನ್ನ ಪ್ರವಚನ ನಿಲ್ಲಿಸಿ ಗಲಾಟೆಗೆ ಕಾರಣ ಏನೆಂದು ಕೇಳಿದ.
“ನಮ್ಮ ಪಂಥದ ಸ್ಥಾಪಕನಿಗೆ ಎಂಥ ಪವಾಡ ಸದೃಶ ಸಾಮರ್ಥ್ಯ ಇತ್ತು ಅಂದರೆ,” ಬಡಾಯಿ ಕೊಚ್ಚಲು ಆರಂಭಿಸಿದ ಆ ಪೂಜಾರಿ, “ಅವನು ನದಿಯ ಒಂದು ದಡದಲ್ಲಿ ನಿಂತು ಕೈನಲ್ಲಿ ಕುಂಚ ಹಿಡಿದಾಗ ಅವನ ಅನುಚರ ಇನ್ನೊಂದು ದಡದಲ್ಲಿ ಕಾಗದದ ಹಾಳೆಯೊಂದನ್ನು ಎತ್ತಿ ಹಿಡಿದು ನಿಂತುಕೊಂಡರೆ ಅದರ ಮೇಲೆ ಪವಿತ್ರ ಅಮಿದಾನ (ಮಹಾಯಾನ ಪಂಥದಲ್ಲಿ ಬುದ್ಧನ ಒಂದು ಪರ್ಯಾಯ ನಾಮ) ಹೆಸರನ್ನು ಗಾಳಿಯ ಮುಖೇನ ಬರೆಯುತ್ತಿದ್ದ. ನೀನು ಅಂಥ ಅದ್ಭುತವಾದದ್ದು ಏನನ್ನಾದರೂ ಮಾಡಬಲ್ಲೆಯಾ? ಎಂಬುದಾಗಿ ಸವಾಲು ಹಾಕಿದ.

ಬಾಂಕೈ ನಿರುದ್ವೇಗದಿಂದ ಇಂತು ಉತ್ತರಿಸಿದ: “ಬಹುಶಃ ನಿನ್ನ ನರಿಯೂ ಆ ಚಮತ್ಕಾರವನ್ನು ಮಾಡುತ್ತದೆ. ಆದರೂ ಝೆನ್‌ನ ಕ್ರಮ ಅದಲ್ಲ. ನನಗೆ ಹಸಿವಾದಾಗ ಊಟ ಮಾಡುತ್ತೇನೆ, ನನಗೆ ಬಾಯಾರಿಕೆ ಆದಾಗ ನೀರು ಕುಡಿಯುತ್ತೇನೆ. ಇವೇ ನಾನು ಮಾಡುವ ಪವಾಡಗಳು.”

*****

೪. ಮೂರು ತರಹದ ಶಿಷ್ಯರು
ಗೆಟ್ಟನ್ ಎಂಬ ಹೆಸರಿನ ಝೆನ್‌ ಗುರುವೊಬ್ಬ ಟೋಕುಗವಾ ಕಾಲದ ಉತ್ತರಾರ್ಧದಲ್ಲಿ ಇದ್ದ. ಅವನು ಯಾವಾಗಲೂ ಇಂತು ಹೇಳುತ್ತಿದ್ದ: “ಮೂರು ತರಹದ ಶಿಷ್ಯರು ಇರುತ್ತಾರೆ: ಇತರರಿಗೆ ಝೆನ್‌ ತಿಳಿಸುವವರು, ದೇವಾಲಯಗಳನ್ನೂ ಪೂಜಾಸ್ಥಳಗಳನ್ನೂ ಸುಸ್ಥಿತಿಯಲ್ಲಿ ಇಟ್ಟುಕೊಳ್ಳುವವರು ಮತ್ತು ಅಕ್ಕಿ ಚೀಲಗಳು ಹಾಗೂ ಬಟ್ಟೆ ತೂಗುಹಾಕಲು ಉಪಯೋಗಿಸುವ ಸಾಧನಗಳು.”
ಗಾಸನ್‌ ಹೆಚ್ಚುಕಮ್ಮಿ ಇದೇ ಅಭಿಪ್ರಾಯವನ್ನು ಅಭಿವ್ಯಕ್ತಗೊಳಿಸಿದ್ದಾನೆ. ಅವನು ಟೆಕುಸುಯ್‌ ಮಾರ್ಗದರ್ಶನದಲ್ಲಿ ಅಧ್ಯಯಿಸುತ್ತಿದ್ದಾಗ ಅವಮ ಗುರು ಬಲು ಕಠಿನ ಶಿಸ್ತಿನವನಾಗಿದ್ದ. ಕೆಲವೊಮ್ಮೆ ಅವನನ್ನು ಗುರು ಹೊಡೆದದ್ದೂ ಉಂಟು. ಈ ತೆರನಾದ ಬೋಧನೆಯನ್ನು ಸಹಿಸಿಕೊಳ್ಳಲಾಗದ ಇತರ ವಿದ್ಯಾರ್ಥಿಗಳು ಬಿಟ್ಟು ಹೋದರು. ಗಾಸನ್‌ ಇಂತು ಹೇಳುತ್ತಾ ಅಲ್ಲಿಯೇ ಇದ್ದ: “ಒಬ್ಬ ಸತ್ವಹೀನ ವಿದ್ಯಾರ್ಥಿ ಅಧ್ಯಾಪಕನ ಪ್ರಭಾವವನ್ನು ಉಪಯೋಗಿಸಿಕೊಳ್ಳುತ್ತಾನೆ. ಮಧ್ಯಮಗುಣದ ವಿದ್ಯಾರ್ಥಿ ಅಧ್ಯಾಪಕನ ಕಾರುಣ್ಯವನ್ನು ಮೆಚ್ಚಿಕೊಳ್ಳುತ್ತಾನೆ. ಒಬ್ಬ ಒಳ್ಳೆಯ ವಿದ್ಯಾರ್ಥಿ ಅಧ್ಯಾಪಕನ ಶಿಸ್ತಿನಿಂದಾಗಿ ಸದೃಢನಾಗಿ ಬೆಳೆಯುತ್ತಾನೆ.”

*****

೫. ದಡ್ಡ ಪ್ರಭು
ಡೈಗು ಮತ್ತು ಗೂಡೋ ಎಂಬ ಇಬ್ಬರು ಝೆನ್ ಗುರುಗಳು ತನ್ನನ್ನು ಭೇಟಿ ಆಗುವಂತೆ ಒಬ್ಬ ಪ್ರಭು ಆಹ್ವಾನಿಸಿದ. ಪ್ರಭುವನ್ನು ಕಾಣಲು ಬಂದ ನಂತರ ಗೂಡೋ ಹೇಳಿದ:” ನೀನು ಸ್ವಭಾವತಃ ವಿವೇಕಿ ಮತ್ತು ಝೆನ್‌ ಕಲಿಯಲು ಅಗತ್ಯವಾದ ಸಾಮರ್ಥ್ಯ ನಿನ್ನಲ್ಲಿ ಹುಟ್ಟಿನಿಂದಲೇ ಅಂತರ್ಗತವಾಗಿದೆ.”
“ಅಸಂಬದ್ಧ ಮಾತು” ಎಂಬುದಾಗಿ ಹೇಳಿದ ಡೈಗು. “ಈ ಪೆದ್ದನನ್ನು ನೀನೇಕೆ ಹೊಗಳುತ್ತಿರುವೆ? ಅವನೊಬ್ಬ ಪ್ರಭುವಾಗಿರಬಹುದು, ಆದರೆ ಅವನಿಗೆ ಝೆನ್ ಕುರಿತು ಏನೂ ಗೊತ್ತಿಲ್ಲ.”
ಗೂಡೋವಿಗೋಸ್ಕರ ದೇವಾಲಯ ನಿರ್ಮಿಸಬೇಕಾಗಿದ್ದ ಪ್ರಭು ಆ ಯೋಜನೆ ಕೈಬಿಟ್ಟು ಡೈಗುಗೋಸ್ಕರ ದೇವಾಲಯ ನಿರ್ಮಿಸಿ ಅವನ ಹತ್ತಿರ ಝೆನ್‌ ಅಧ್ಯಯಿಸಿದ.

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x